ಬಾಗಲಕೋಟೆ: ಸರ್ಕಾರಿ ಜಾಗ ಖಾಲಿ ಇದ್ದರೆ ಸಾಕು ಒತ್ತುವರಿ ಮಾಡಿಕೊಳ್ಳೋಕೆ ಪ್ಲಾನ್ ಮಾಡಿಕೊಳ್ಳುವರು ಹೆಚ್ಚು. ಇವತ್ತಿನ ನಮ್ಮ ಪಬ್ಲಿಕ್ ಹೀರೋ ಯಲ್ಲಪ್ಪ ಶಿಂಧೆ, ಸರ್ಕಾರಿ ಜಾಗದಲ್ಲಿ ವನೋತ್ಸವ ಮಾಡ್ತಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಉತ್ತೂರು ಗ್ರಾಮದ ನಿವಾಸಿಯಾಗಿರುವ ಯಲ್ಲಪ್ಪ ಶಿಂಧೆ ನಮ್ಮ ಪಬ್ಲಿಕ್ ಹೀರೋ. 62 ವರ್ಷದ ಯಲ್ಲಪ್ಪ ಶಿಂಧೆ ಸರ್ಕಾರಿ ಜಾಗದಲ್ಲಿ ಮಿನಿ ಅರಣ್ಯವನ್ನು ಮಾಡಿದ್ದಾರೆ. ಬಿಡುವಿನ ವೇಳೆ ಸರ್ಕಾರಿ ಜಾಗಗಳಲ್ಲಿ ಗಿಡ ನೆಟ್ಟು- ನೀರೆರೆದು ಕಾಡು ಬೆಳೆಸುತ್ತಿದ್ದಾರೆ. ಕಳೆದ 11 ವರ್ಷಗಳಿಂದ 1,500ಕ್ಕೂ ಹೆಚ್ಚು ಸಸಿಗಳನ್ನು ಮರಗಳನ್ನಾಗಿಸಿದ್ದಾರೆ.
ಮರ ಕಡಿಯೋವರ ವಿರುದ್ಧ ಕಂಪ್ಲೆಂಟ್ ಕೊಟ್ಟು, ಮುಧೋಳ ತಹಶೀಲ್ದಾರ್ ಕಚೇರಿ ಎದುರು ಉಪವಾಸ ಕುಳಿತು ಬಿಸಿ ಮುಟ್ಟಿಸಿದ್ದಾರೆ. ಜೊತೆಗೆ, ಸರ್ಕಾರಿ ಜಾಗಗಳನ್ನು ಉಳಿಸಿ, ಒತ್ತುವರಿ ತೆರವಿಗೆ ಆಗ್ರಹಿಸಿ ಬಾಗಲಕೋಟೆ ಡಿಸಿ ಕಚೇರಿವರೆಗೆ ಪಾದಯಾತ್ರೆಯನ್ನೂ ಮಾಡಿದ್ದರು.
ಗ್ರಾಮದ ಸುತ್ತಮುತ್ತಲ 8 ಎಕರೆ ಸರ್ಕಾರಿ ಬರಡು ಜಾಗದಲ್ಲಿ ಗಿಡನೆಟ್ಟು ನಂದನವಗೊಳಿಸಿದ್ದಾರೆ. ಶಾಲಾ ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಪರಿಸರ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಬಡಕುಟುಂಬದ ಯಲ್ಲಪ್ಪ ಶಿಂಧೆ ಅವರು ಗ್ರಾಮದಲ್ಲೇ ಚಹಾ ಅಂಗಡಿ ತೆರೆದು ಬದುಕು ಕಟ್ಟಿಕೊಂಡಿದ್ದಾರೆ. ಬಿಡುವಿನ ಸಮಯವನ್ನು ಪರಿಸರ ಸೇವೆಗೆ ಮೀಸಲಿರಿಸಿದ್ದಾರೆ.