ಚಿಕ್ಕಬಳ್ಳಾಪುರ: ಕೆಲವರಿಗೆ ಎಲ್ಲಾ ಅಂಗಗಳೂ ಚೆನ್ನಾಗಿದ್ರೂ ದುಡಿದು ತಿನ್ನೋಕೆ ಸೋಮಾರಿತನ. ಆದರೆ ನಮ್ಮ ಈ ಪಬ್ಲಿಕ್ ಹೀರೋಗೆ ಎರಡೂ ಕಣ್ಣುಗಳಿಲ್ಲ. ಆದ್ರೂ ಕೃಷಿ ಮಾಡ್ತಿದ್ದಾರೆ. ಮಾದರಿ ರೈತನಾಗಿ ನಾಲ್ಕೈದು ಜನಕ್ಕೆ ಕೆಲಸ ಕೊಟ್ಟಿದ್ದಾರೆ. ತಮ್ಮ ಅಂಧತ್ವವನ್ನೇ ಮೆಟ್ಟಿನಿಂತಿದ್ದಾರೆ.
ಯಲ್ಲಪ್ಪ ನಮ್ಮ ಪಬ್ಲಿಕ್ ಹೀರೋ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದುರ್ಗೇನಹಳ್ಳಿಯವರು. ಇವರಿಗೆ 3 ವರ್ಷವಿದ್ದಾಗ ಅಪ್ಪ ತೀರಿ ಹೋದ್ರು. 5 ವರ್ಷವಿದ್ದಾಗ ಪೋಲಿಯೋ ಅಟ್ಯಾಕ್ ಆಗಿ ಎರಡೂ ಕಣ್ಣುಗಳ ದೃಷ್ಟಿ ಹೋಯ್ತು. ಇಂತ ಕಡುಕಷ್ಟದಲ್ಲಿ ತಾಯಿ ನೆರಳಲ್ಲಿ ಬೆಳೆದ ಯಲ್ಲಪ್ಪ ಇವತ್ತು ಮಾದರಿ ರೈತರಾಗಿದ್ದಾರೆ. ಎರಡು ಎಕರೆ ಬಂಜರು ಭೂಮಿಯನ್ನ ಫಲವತ್ತಾಗಿ ಮಾಡಿ ಪಾಲಿ ಹೌಸ್ ನಿರ್ಮಿಸಿ ಸೌತೆಕಾಯಿ ಸೇರಿದಂತೆ ವಿವಿಧ ಬೆಳೆ ಬೆಳೆಯುತ್ತಿದ್ದಾರೆ.
ಯಲ್ಲಪ್ಪರಿಗೆ ಮದುವೆಯಾಗಿದ್ದು, ಇವರ ಹೆಂಡತಿ ಇವರನ್ನು ಅರ್ಥಮಾಡಿಕೊಳ್ಳದೇ ದೂರವಾದ್ರು. 12 ವರ್ಷದ ಪುಟ್ಟ ಮಗನಿದ್ದಾನೆ. ಮಗ ಹಾಗೂ ಅಮ್ಮ ಯಲ್ಲಪ್ಪರಿಗೆ ಕೆಲಸದಲ್ಲಿ ಸಾಥ್ ನೀಡುತ್ತಾರೆ. ಕಣ್ಣಿಲ್ಲದಿದ್ರೂ ಯಲ್ಲಪ್ಪ ಸ್ವಾಭಿಮಾನದಿಂದ ಸಾರ್ಥಕತೆಯ ಜೀವನ ನಡೆಸುತ್ತಿದ್ದಾರೆ.