ಬೆಂಗಳೂರು: ಮಂಗಳಮುಖಿಯರನ್ನು ಸಮಾಜದಲ್ಲಿ ಅಸ್ಪøಶ್ಯರ ಹಾಗೆ ನಡೆಸಿಕೊಳ್ಳಲಾಗ್ತಿದೆ. ಮಂಗಳಮುಖಿಯರು ಭಿಕ್ಷೆ ಬೇಡ್ತಾರೆ, ಅಕ್ರಮ ದಾರಿ ಹಿಡಿತಾರೆ ಅನ್ನೋ ಮಾತಿದೆ. ಆದರೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಸ್ಟೋರಿಯಲ್ಲಿ ನಾವ್ ತೋರಿಸ್ತಿರೋ ಮಂಗಳಮುಖಿ ಇದಕ್ಕೆ ತದ್ವಿರುದ್ಧವಾಗಿದ್ದಾರೆ.
ಬೆಂಗಳೂರಿನ ಮಿನರ್ವ ಸರ್ಕಲ್ ನಿವಾಸಿ ಸರಣ್ಯ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಹುಟ್ಟುತ್ತಾ ಹುಡುಗನಾಗಿದ್ದ ಸರಣ್ಯ, ಬೆಳೀತಾ ಮಂಗಳಮುಖಿ ಅಂತಾ ಗೊತ್ತಾಗುತ್ತಲೇ ಮನೆಯವರು ಹೊರಹಾಕಿದ್ರಂತೆ. ಹೀಗಾಗಿ ಬೀದಿಗೆ ಬಿದ್ದ ಸರಣ್ಯ ಸ್ವಾಭಿಮಾನದಿಂದ ಬದುಕು ಕಟ್ಟಿಕೊಂಡಿದ್ದಾರೆ.
ಸರಣ್ಯರ ಸ್ವಾಭಿಮಾನದ ಬದುಕು ನೋಡಿದ ಮನೆಯವರು ಅವರನ್ನು ಒಪ್ಪಿಕೊಂಡಿದ್ದಾರೆ. ಈಗ ತರಕಾರಿ ಜೊತೆಗೆ ಮಿನರ್ವ ಸರ್ಕಲ್ ಬಳಿ ಫುಟ್ಪಾತ್ನಲ್ಲಿ ಹೋಟೆಲ್ ಇಟ್ಟುಕೊಂಡಿದ್ದಾರೆ. ತಾಯಿ-ತಂದೆ ಮತ್ತು ಅಕ್ಕನಿಗೆ ಆಸರೆಯಾಗಿದ್ದಾರೆ. ಇಷ್ಟಕ್ಕೆ ಆಗಿದ್ರೆ ಸರಣ್ಯ ಬಗ್ಗೆ ವಿಶೇಷ ಅನಿಸ್ತಿರಲಿಲ್ಲವೇನೋ. ಆದ್ರೆ ದಿನನಿತ್ಯ ಹತ್ತರಿಂದ ಹದಿನೈದು ಜನ ಬಡ ಕಾರ್ಮಿಕರಿಗೆ ತಮ್ಮ ಹೋಟೆಲ್ನಲ್ಲೇ ಉಚಿತವಾಗಿ ಊಟ ಕೊಡ್ತಿದ್ದಾರೆ.
ಮಂಗಳಮುಖಿಯರೆಂದ್ರೆ ತಾತ್ಸಾರ ಮನೋಭಾವದಿಂದ ನೋಡುವ ಸಮಾಜದಲ್ಲಿ ಸರಣ್ಯ ಅವರ ಸ್ವಾಭಿಮಾನದ ಬದುಕು ಎಲ್ಲರಿಗೂ ಮಾದರಿಯಾಗಿದೆ.