ಹಾವೇರಿ: ರಾಜ್ಯದಲ್ಲಿ ಮಳೆ ಕೊರತೆ ಮತ್ತು ಬರಗಾಲಕ್ಕೆ ಕಾರಣ ಏನು ಅನ್ನೋದು ಎಲ್ಲರ ಅರಿವಿಗೆ ಬಂದಿದೆ. ಅದ್ರಲ್ಲೂ ರೈತಾಪಿ ವರ್ಗ ಭಾರೀ ಕಾಳಜಿ ವಹಿಸಿದೆ. ಹೀಗಾಗಿ, ರೈತರು, ಸ್ಥಳೀಯರು, ಸಂಘ ಸಂಸ್ಥೆಗಳು ಮೊದಲಿಗೆ ಹೂಳೆತ್ತುವ ಮೂಲಕ ಕೆರೆಗಳಿಗೆ ಕಾಯಕಲ್ಪ ನೀಡ್ತಿವೆ. ಹೀಗೆ ಹೂಳೆತ್ತಿರುವವರ ಪೈಕಿ ಇವತ್ತಿನ ಹಾವೇರಿಯ ರುದ್ರೇಶ್ ಸಹ ಒಬ್ರು.
ವಿಶಾಲವಾದ ಕೆರೆಯಲ್ಲಿ ಬೆಳೆದಿರೋ ಮುಳ್ಳು-ಕಂಟಿಗಳು. ಹೂಳು ತೆಗೆಯುತ್ತಿರೋ ಜೆಸಿಬಿಗಳು. ಜೊತೆಗೆ ಕೆರೆಯನ್ನ ತೋರಿಸ್ತಿರೋ ಇವರೇ ಇವತ್ತಿನ ಪಬ್ಲಿಕ್ ಹೀರೋ. ಹೆಸರು ರುದ್ರೇಶ್ ಚಿನ್ನಣ್ಣವರ್. ಹಾವೇರಿ ತಾಲೂಕಿನ ಚಿಕ್ಕಲಿಂಗದಹಳ್ಳಿ ಗ್ರಾಮದ ರುದ್ರೇಶ್ ಎಂಎಸ್ಡಬ್ಯೂ ಓದಿದ್ದು, ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ. ಸ್ವಂತ ಹಣ ಹಾಗೂ ಗ್ರಾಮಸ್ಥರ ಸಹಾಯ ಪಡೆದು ಹೂಳು ಹಾಗೂ ಮುಳ್ಳು-ಕಂಟಿಗಳನ್ನ ತೆಗೆಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ 32 ಎಕರೆ ಕೆರೆಯಲ್ಲಿ ಹೂಳು ಹಾಗೂ ಹೆಚ್ಚು ಮುಳ್ಳು ಕಂಟಿ ಬೆಳೆದು ಕೆರೆಯಲ್ಲಿ ನೀರು ನಿಲ್ಲುತ್ತಿರಲಿಲ್ಲ. ಗ್ರಾಮದ ಜನರ ಹಾಗೂ ರೈತರ ಜೊತೆಗೆ ಸಭೆ ಮಾಡಿ ರುದ್ರೇಶ್ ಅವರು 20 ದಿನಗಳಿಂದ ಕೆರೆಗೆ ಕಾಯಕಲ್ಪ ನೀಡಿದ್ದಾರೆ. ಇದಕ್ಕಾಗಿ 2 ಲಕ್ಷ ರೂ. ಹಣ ಖರ್ಚು ಮಾಡಿದ್ದಾರೆ. ತುಂಗಾ ಮೇಲ್ದಂಡೆ ಕಾಲುವೆ ಮುಖಾಂತರ ಕೆರೆಗೆ ನೀರು ತರುವ ಭರವಸೆ ನೀಡಿದ್ದಾರೆ ರುದ್ರೇಶ್.
https://www.youtube.com/watch?v=-rUSJLtifXk