-ಶೋಷಿತರಿಗೆ ದಾರಿದೀಪವಾದ ಅಧಿಕಾರಿ
ಕಾರವಾರ: ಒಬ್ಬ ಅಧಿಕಾರಿ ಸಮಾಜಮುಖಿಯಾಗಿದ್ದರೆ ಎಷ್ಟರ ಮಟ್ಟಿಗೆ ಜನ ಕಷ್ಟ ಕಾರ್ಪಣ್ಯಗಳನ್ನು ದೂರವಾಗಿಸಬಹುದು ಅನ್ನೋದಕ್ಕೆ ಕಾರವಾರದ ಇವತ್ತಿನ ಪಬ್ಲಿಕ್ ಹೀರೋ ರಾಜೇಂದ್ರ ಬೇಕಲ್ ಅವರು ನಿರ್ದಶನವಾಗಿದ್ದಾರೆ. ಸಂಕಷ್ಟ, ದೌರ್ಜನ್ಯಕ್ಕೊಳಗಾಗಿ ಕಣ್ಣೀರು ಹಾಕುತ್ತಿದ್ದ ಮಹಿಳೆಯರು ರಾಜೇಂದ್ರ ಬೇಕಲ್ ಅವರ ಸಹಾಯದಿಂದ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.
ಉತ್ತರ ಕನ್ನಡದ ಹಿಂದಿನ ಡಿಸಿ ನಕುಲ್ ಹಾಗೂ ಕಾರವಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಾಲಿ ನಿರ್ದೇಶಕ ರಾಜೇಂದ್ರ ಬೇಕಲ್ ನೊಂದ ಜೀವಗಳಿಗೆ ಸಾಂತ್ವನ ಹೇಳಿ ಚಂದದ ಬದುಕು ಕಟ್ಟಿಕೊಳ್ಳಲು ಮಾರ್ಗವನ್ನು ತೋರಿಸಿದ್ದಾರೆ. ತಮ್ಮ ಕಷ್ಟದ ಬಗ್ಗೆ ಮಹಿಳೆಯರು ಅಳಲು ತೋಡಿಕೊಂಡಾಗ ರಾಜೇಂದ್ರ ಬೇಕಲ್ ಅವರು ಚಿಕ್ಕಿ ತಯಾರಿಕೆಯ ದಾರಿ ತೋರಿಸಿದ್ದರು.
ಕಾರವಾರ, ಅಂಕೋಲ, ಶಿರಸಿಯಲ್ಲಿ ನೊಂದ ತಲಾ ಐದು ಜನರ ಮಹಿಳಾ ಗುಂಪುಗಳನ್ನು ರಚಿಸಿ, ಮಹಿಳಾ ಅಭಿವೃದ್ಧಿ ನಿಗಮದಡಿ ತಲಾ 20 ಸಾವಿರದಂತೆ ನೆರವು ನೀಡಿದ್ದಾರೆ. ಅಷ್ಟೇ ಅಲ್ಲ, ಎನ್ಆರ್ಎಲ್ಎಂ ಯೋಜನೆಯಡಿ 2017ರಲ್ಲಿ 2.50 ಲಕ್ಷ ಸಾಲ ನೀಡಿ ಚಿಕ್ಕಿ ಬರ್ಫಿ ತಯಾರಿಕೆ ತರಬೇತಿ ನೀಡಿದ್ದಾರೆ. ಈ ಚಿಕ್ಕಿಗಳನ್ನು ಎಂಎಸ್ಪಿಟಿಸಿ ಮಹಿಳಾ ಸಂಘದ ಮೂಲಕ ಅಂಗನವಾಡಿಗಳಿಗೆ ಮಾರಾಟ ಮಾಡಲು ವ್ಯವಸ್ಥೆಯೂ ಮಾಡಿಸಿದ್ದಾರೆ.
ನೊಂದ ಮಹಿಳೆಯರು ರಾಜೇಂದ್ರ ಅವರ ಸಹಾಯದಿಂದಾಗಿ ಶಿರವಾಡದಲ್ಲಿ ಶ್ರೀ ಸಾಯಿ ಶೇಂಗಾ ಚಿಕ್ಕಿ ಪ್ರಾಡಕ್ಟ್ ಅಂತ ಸ್ವಂತ ಉದ್ಯಮ ಪ್ರಾರಂಭಿಸಿದ್ದಾರೆ. ಅಲ್ಲದೆ ಉತ್ಕøಷ್ಟ ಗುಣಮಟ್ಟ-ಶುಚಿ-ರುಚಿಯ ಮೀರಾ ಶೇಂಗಾ ಚಿಕ್ಕಿ ಈಗ ಎಲ್ಲಾ ಕಡೆ ಪ್ರಸಿದ್ಧಿ ಪಡೆದಿದೆ. ಪ್ರತಿ ದಿನ 6 ಟನ್ ಚಿಕ್ಕಿಯನ್ನು ಕಾರವಾರ ತಾಲೂಕಿನ ಅಂಗನವಾಡಿಗೆ ನೀಡುತ್ತಿದ್ದಾರೆ. ಇವರ ಸಾಧನೆ-ಶ್ರದ್ಧೆಗೆ ರಾಷ್ಟ್ರೀಯ ಸ್ಕಾಚ್ ಅವಾರ್ಡ ಬಂದಿದ್ದು, 50 ಲಕ್ಷ ರೂಪಾಯಿಗಳ ಅನುದಾನ ಸಿಕ್ಕಿದೆ. ಇದನ್ನು ಬಳಸಿಕೊಂಡು ಕಾರವಾರ ಮತ್ತು ಶಿರಸಿ ಭಾಗದಲ್ಲಿ ಯಂತ್ರಗಳ ಮೂಲಕ ಚಿಕ್ಕಿ ತಯಾರಿಕೆ ಘಟಕ ಸ್ಥಾಪನೆಗೆ ಮುಂದಾಗಿದ್ದಾರೆ.
ಬದುಕಿನ ಜಟಕಾಬಂಡಿ ಎಳೆಯಲು ದಾರಿಯೇ ಕಾಣದ ಅನ್ಯದಾರಿ ಹಿಡಿದು ಕಣ್ಣೀರು ಹಾಕ್ತಿದ್ದ ಈ ನೊಂದ ಜೀವಗಳಿಗೆ ರಾಜೇಂದ್ರ ಬೇಕಲ್ ಅವರು ದಾರಿದೀಪವಾಗಿದ್ದಾರೆ.