ರಾಯಚೂರು: ಮನಸ್ಸಿದ್ದರೆ ಮಾರ್ಗ ಅಂಥ ಸಾಧನೆ ಮಾಡಿರೋ ಹಲವರ ಬಗ್ಗೆ ನಾವು ತೋರಿಸಿದ್ದೇವೆ. ಈ ಪಟ್ಟಿಗೆ ಲಿಂಗಸುಗೂರಿನ ಬೇಡರಕಾಲರಕುಂಟಿ ಗ್ರಾಮದ ಮೇಷ್ಟ್ರು ಹಾಗೂ ಊರಿನ ಜನ ಸೇರಿದ್ದಾರೆ.
ಹೌದು. ರಾಯಚೂರಿನ ಲಿಂಗಸುಗೂರು ತಾಲೂಕಿನ ಬೇಡರಕಾಲರಕುಂಟಿ ಗ್ರಾಮದ ಆಂಜನೇಯ ದೇವಾಲಯದ ಬಳಿ 2 ಕೋಣೆಯಲ್ಲಿ ನಡೆಯುತ್ತಿದ್ದ ಶಾಲೆಯು ಮುಖ್ಯೋಪಧ್ಯಾಯ ಸೋಮಶೇಖರ್ ಅವರಿಂದಾಗಿ ಈಗ ಭವ್ಯವಾಗಿ ತಲೆ ಎತ್ತಿದೆ.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ದಾನಿಗಳು ಜಾಗ ಕೊಟ್ಟಿದ್ದರು. ಆದರೆ, ಆ ಪ್ರದೇಶ ತಗ್ಗು-ಗುಂಡಿಯಿಂದ ತುಂಬಿದ್ದ ಕಾರಣ ಸರ್ಕಾರ ಅನುದಾನ ಕೊಡಲು ಮೀನಾಮೇಷ ಎಣಿಸಿತ್ತು. ಆದರೆ, ಗ್ರಾಮಸ್ಥರನ್ನೆಲ್ಲಾ ಒಗ್ಗೂಡಿಸಿದ ಹೆಡ್ ಮಾಸ್ಟರ್ ಸೋಮಶೇಖರ್ ಅವರು ಸಮತಟ್ಟು ಮಾಡಿ, ಸುಂದರ ಶಾಲೆ-ಉದ್ಯಾನವನ ನಿರ್ಮಿಸಿದ್ದಾರೆ. ಈಗ 1 ರಿಂದ 5ನೇ ತರಗತಿವರೆಗೆ 93 ವಿದ್ಯಾರ್ಥಿಗಳು, ನಾಲ್ವರು ಶಿಕ್ಷಕರಿದ್ದಾರೆ ಅಂತ ಗ್ರಾಮದ ಮುಖಂಡ ಸಿದ್ದಯ್ಯ ಸ್ವಾಮಿ ತಿಳಿಸಿದ್ದಾರೆ.
ಶಾಲೆ ಆವರಣದಲ್ಲಿ ಹಾಳಾಗಿದ್ದ ಬಾವಿಯನ್ನ ದುರಸ್ತಿ ಮಾಡಿ, 250 ಗಿಡ ನೆಟ್ಟು ಅದಕ್ಕೆ ನೀರುಣಿಸ್ತಿದ್ದಾರೆ. ಬಿಸಿಯೂಟಕ್ಕೆ ಇಲ್ಲಿನ ತರಕಾರಿಗಳನ್ನೇ ಬಳಸಲಾಗುತ್ತದೆ. ತಾಜ್ಯದಿಂದ ಸಾವಯವ ಗೊಬ್ಬರ ತಯಾರಿಸಿ ಬಳಸುತ್ತಿದ್ದಾರೆ. ಔಡಲ ಬೀಜಗಳನ್ನ ಮಾರಾಟ ಮಾಡಿ ಶಾಲಾ ಖರ್ಚಿಗೆ ಬಳಸ್ತಿದ್ದಾರೆ. ಜೊತೆಗೆ, ಗ್ರಾಮಸ್ಥರು ಹಾಗೂ ಇತರೆ ದಾನಿಗಳಿಂದ ಶಾಲೆಗೆ ಕಾಂಪೌಂಡ್, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಊಟಕ್ಕಾಗಿ ಬೆಂಚ್ ವ್ಯವಸ್ಥೆ ಮಾಡಲಾಗಿದೆ ಎಂದು ಮುಖ್ಯೋಪಾಧ್ಯಾಯ ಸೋಮಶೇಖರ್ ಹೇಳುತ್ತಾರೆ.
ಇಷ್ಟೇ ಅಲ್ಲ, ಮಕ್ಕಳಿಗೆ ಹೆಚ್ಚುವರಿ ತರಗತಿಗಳನ್ನ ತೆಗೆದುಕೊಂಡು ನವೋದಯ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೇರಿ ಇತರೆ ಪರೀಕ್ಷೆಗಳಿಗಾಗಿ ಕೋಚಿಂಗ್ ನೀಡ್ತಿದ್ದಾರೆ.
https://www.youtube.com/watch?v=n0dbOUTqjto
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv