ಉಡುಪಿ: ಕೊರೊನಾ ಲಾಕ್ಡೌನ್ನಿಂದಾಗಿ ಕೂಲಿ ಕಾರ್ಮಿಕರು ಊರಿಗೆ ವಾಪಸ್ ಹೋಗಲು ಸಾಧ್ಯವಾಗದೆ ಉಡುಪಿಯಲ್ಲೇ ಲಾಕ್ ಆಗಿದ್ದಾರೆ. ಮೂರು ಹೊತ್ತು ಆಹಾರ ಸಿಕ್ಕರೂ ಉಡುವ ಬಟ್ಟೆಯಿಲ್ಲದೆ ಜನ ಪರದಾಡುತ್ತಿದ್ದರು. ಹೀಗಾಗಿ ಅವರಿಗೆ ಉಡುಪಿಯ ಪಬ್ಲಿಕ್ ಹೀರೋ ಅವರಿಗೆ ಸಹಾಯ ಮಾಡಿದ್ದಾರೆ.
ಸಮಾಜಸೇವಕ ಉಡುಪಿಯ ಪಬ್ಲಿಕ್ ಹೀರೋ ನಿತ್ಯಾನಂದ ಒಳಕಾಡು 170 ಜನ ಕಾರ್ಮಿಕರಿಗೆ ಬಟ್ಟೆ ಹಂಚಿದ್ದಾರೆ. ಹೀಗಾಗಿ ಒಂದೆರಡು ಬಟ್ಟೆಯಲ್ಲಿ ಅರ್ಧ ತಿಂಗಳು ಕಳೆದ ಜೀವಗಳು ಈಗ ಖುಷಿಯಾಗಿವೆ. ಮೂರು ಹೊತ್ತು ಅನ್ನದ ಜೊತೆ ಬಟ್ಟೆ ಕೂಡ ಸಿಕ್ಕಿದ್ದರಿಂದ ಕಾರ್ಮಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಭಾರತ ಲಾಕ್ಡೌನ್ ಆದಾಗ ಸುಮಾರು ಮೂರೂವರೆ ಸಾವಿರ ಕಾರ್ಮಿಕರು ತಮ್ಮ ಜಿಲ್ಲೆ, ರಾಜ್ಯಕ್ಕೆ ಹೊರಟು ನಿಂತಿದ್ದರು. ಜಿಲ್ಲೆಯ ನಾಲ್ಕು ಗಡಿಗಳಲ್ಲಿ ಕಾರ್ಮಿಕರನ್ನು ತಡೆಹಿಡಿದು ಮತ್ತೆ ಅವರನ್ನು ಬಿಡಾರಕ್ಕೆ ನಿರಾಶ್ರಿತರ ಕೇಂದ್ರಕ್ಕೆ ಬಿಡಲಾಗಿತ್ತು. ಕಳೆದ ಇಪ್ಪತ್ತೈದು ದಿನಗಳಿಂದಲೂ ಅವರಿಗೆ ಮೂರು ಹೊತ್ತು ಆಹಾರ ಕೊಡಲಾಗುತ್ತಿದೆ. ಆದರೆ ಅವರು ಹೆಚ್ಚುವರಿ ಬಟ್ಟೆ ಇಲ್ಲದೆ ಪರದಾಡುತ್ತಿದ್ದರು. ಒಂದೆರಡು ಜೊತೆ ಬಟ್ಟೆಯಲ್ಲಿ ಇಷ್ಟು ದಿನ ಕಳೆದಿದ್ದರೂ ಇದೀಗ ನಿತ್ಯಾನಂದ ಒಳಕಾಡು ಎಲ್ಲರಿಗೂ ಹೊಸ ಬಟ್ಟೆಯನ್ನು ವಿತರಣೆ ಮಾಡಿದ್ದಾರೆ.
ಪರ್ಕಳದ ಪಾಟೀಲ್ ಕ್ಲಾತ್ ಸ್ಟೋರ್ ಮಾಲೀಕರು ಸಹಾಯ ಮಾಡಿದ್ದಾರೆ. ಉಡುಪಿ ನಗರಸಭೆಯ ಕಮಿಷನರ್ ಬಟ್ಟೆಗಳನ್ನು ವಿತರಣೆ ಮಾಡಿದರು. ಆನಂದ್ ಕಲ್ಲೋಳಿಕರ್ ಮಾತನಾಡಿ, ಎಲ್ಲರಿಗೂ ಎಲ್ಲ ಕಡೆಯಿಂದಲೂ ಆಹಾರ ಸಿಗುತ್ತಿದೆ. ಆದರೆ ಅವರಿಗೆ ಅಗತ್ಯವಾಗಿರುವುದು ಬಟ್ಟೆ. ಅದನ್ನು ಈಗ ವಿತರಿಸುತ್ತಿದ್ದೇವೆ ಎಂದು ಹೇಳಿದರು.
ಸಮಾಜ ಸೇವಕ ನಿತ್ಯಾನಂದ ಒಳಕಾಡು ಮಾತನಾಡಿ, ಬೋರ್ಡ್ ಸ್ಕೂಲ್ನಲ್ಲಿ ಸುಮಾರು 170 ಜನ ವಲಸೆ ಕಾರ್ಮಿಕರಿದ್ದಾರೆ. ಭಾರತ್ ಬಂದ್ ಆದಾಗ ಅವರು ಉಟ್ಟ ಬಟ್ಟೆಯಲ್ಲಿ ತಮ್ಮ ಊರುಗಳಿಗೆ ಹೊರಟಿದ್ದರು. ಇವರೆಲ್ಲ ಆರ್ಥಿಕವಾಗಿ ಸದೃಢವಾಗಿದ್ದರೂ ಅಗತ್ಯ ವಸ್ತುಗಳನ್ನು ಖರೀದಿಸಲು ಕಷ್ಟ ಪಡುತ್ತಿದ್ದಾರೆ. ನಗರದಲ್ಲಿ ನೂರಾರು ಬಟ್ಟೆ ಅಂಗಡಿಗಳಿದ್ದು, ಜಿಲ್ಲೆಯ ಆಯಾಯ ಭಾಗದಲ್ಲಿ ಇರುವ ನಿರಾಶ್ರಿತರ ಕೇಂದ್ರಕ್ಕೆ ಬಟ್ಟೆ ದಾನ ಮಾಡಿ ಎಂದು ಅವರು ವಿನಂತಿ ಮಾಡಿಕೊಂಡರು.