ರಾಯಚೂರು: ಸರ್ಕಾರಿ ಕೆಲಸದಿಂದ ನಿವೃತ್ತಿಯಾದವರು ಸಂಧ್ಯಾಕಾಲದಲ್ಲಿ ನೆಮ್ಮದಿಯ ಜೀವನ ಬಯಸುತ್ತಾರೆ. ಇವತ್ತಿನ ನಮ್ಮ ಪಬ್ಲಿಕ್ ಹೀರೋ ದೇವದುರ್ಗದ ಮುದುಕಪ್ಪ ಮೇಷ್ಟ್ರು ನಿವೃತ್ತಿ ಬಳಿಕವೂ 22 ವರ್ಷಗಳಿಂದ ವಿದ್ಯಾದಾನ ಮಾಡುತ್ತಿದ್ದಾರೆ.
ನ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮ 80 ವರ್ಷದ ದೇವಪ್ಪ ಮೇಷ್ಟ್ರು ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. 1997ರಲ್ಲೇ ನಿವೃತ್ತಿಯಾದರೂ ಸುಮ್ಮನೆ ಕೂರದೆ 22 ವರ್ಷಗಳಿಂದ ವಿದ್ಯಾದಾನ ಮುಂದುವರಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ, ಮಕ್ಕಳಲ್ಲಿ ಇಂಗ್ಲಿಷ್ ಅಗತ್ಯ ಕಂಡು ಅರಕೆರಾದ ಸರ್ಕಾರಿ ಬಾಲಕರ ಪ್ರೌಢ ಶಾಲೆ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಆದರ್ಶ ವಿದ್ಯಾಲಯ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠ ಬೋಧಿಸುತ್ತಿದ್ದಾರೆ. ದೇವದುರ್ಗ ತಾಲೂಕು ಶೈಕ್ಷಣಿಕವಾಗಿ ಹಿಂದುಳಿದಿದೆ. ಹಾಗಾಗಿ, ಬದುಕಿರುವವರೆಗೂ ಮಕ್ಕಳಿಗೆ ಪಾಠಮಾಡಿಕೊಂಡೇ ಇರುತ್ತೇನೆ ಎಂದು ಮುದುಕಪ್ಪ ಮೇಷ್ಟ್ರು ಹೇಳುತ್ತಾರೆ.
ನಿವೃತ್ತಿ ನಂತರದ ಈ ದಿನಗಳಲ್ಲೂ ಒಂದು ದಿನವೂ ರಜೆ ಪಡೆಯದೆ ತಮ್ಮ ಸೇವೆ ಮುಂದುವರಿಸಿದ್ದಾರೆ. ಮುಖ್ಯವಾಗಿ ವ್ಯಾಕರಣ, ಪ್ರಬಂಧ ಬರೆಯುವುದು, ಇಂಗ್ಲಿಷ್ನಲ್ಲಿ ಮಾತನಾಡುವ ತರಬೇತಿಯನ್ನೂ ನೀಡುತ್ತಿದ್ದಾರೆ. ಇವರ ಹಲವಾರು ವಿದ್ಯಾರ್ಥಿಗಳು ಉನ್ನತ ಹುದ್ದೆಗೇರಿದ್ದಾರೆ.
ರಾಜ್ಯಮಟ್ಟದ ಉತ್ತಮ ಶಿಕ್ಷಕ ಸೇರಿ ಹಲವಾರು ಪ್ರಶಸ್ತಿಗಳನ್ನ ಪಡೆದಿರುವ ಮುದುಕಪ್ಪ ಮೇಷ್ಟ್ರು, ತಮ್ಮ 6 ಜನ ಮಕ್ಕಳಲ್ಲಿ, ಇಬ್ಬರನ್ನು ಸೈನಿಕ ಶಾಲೆಗೆ ಸೇರಿಸಿದ್ದರು. ಅದರಲ್ಲಿ ದೊಡ್ಡಮಗ ಕರ್ನಲ್ ವೆಂಕಟೇಶ್ ನಾಯಕ್ ಸೇನಾಧಿಕಾರಿಯಾಗಿ ನಿವೃತ್ತರಾಗಿದ್ದಾರೆ. ಇವರಿಂದ ಕಲಿತರು ಡಾಕ್ಟರ್, ಇಂಜಿನಿಯರ್, ಬ್ಯಾಂಕ್ ಮ್ಯಾನೇಜರ್ ಆಗಿದ್ದಾರೆ. ಮಾಜಿ ಸಚಿವರಾದ ಹನುಮಂತಪ್ಪ ಆಲ್ಕೋಡ್, ಶಾಸಕ ಶಿವನಗೌಡ ನಾಯಕ್, ಮಾಜಿ ಸಂಸದ ಬಿ.ವಿ.ನಾಯಕ್ ಇವರೆಲ್ಲ ಮುದುಕಪ್ಪ ಮೇಷ್ಟ್ರ ಶಿಷ್ಯರಾಗಿದ್ದಾರೆ.