ಚಿಕ್ಕಮಗಳೂರು: ಓದಿರೋದು ಪಿಯುಸಿ. ಮಾಡೋದು ಅಂಗಡಿಯಲ್ಲಿ ಕವರ್ ಕಟ್ಟುವ ಕೆಲಸ. ವಯಸ್ಸು ಐವತ್ತೆಂಟಾದ್ರು ಸಂಶೋಧಿಸುವ ಗೀಳು ಮಾತ್ರ ಹೋಗಿಲ್ಲ. ಮನೆಯವ್ರಿಗೆ ಬೇಸರ ತರಿಸುವಷ್ಟು ಇವ್ರ ಓದುವ ಹುಚ್ಚೆ ಇವರನ್ನ ಅಸಮಾನ್ಯನನ್ನಾಗಿಸಿದೆ. 1901ರಲ್ಲಿ ರೈಸ್ ಬರೆದ ಪುಸ್ತಕದಲ್ಲೂ ಇಲ್ಲ, ಮೈಸೂರು ವಿಶ್ವವಿದ್ಯಾಲಯ ಹೊರತಂದ ಎಪಿಗ್ರಫಿ ಆಫ್ ಕರ್ನಾಟಕದ ಸಂಚಿಕೆಯಲ್ಲೂ ಇಲ್ಲದ ಸುಮಾರು 30 ಶಾಸನಗಳನ್ನ ಬೆಳಕಿಗೆ ತಂದು, ಮನೆಯವ್ರಿಗೆ ಬೇಸರಿಸಿ, ರಾಜ-ಮಹಾರಾಜರ ಕಾಲದ ಭಾರತದ ಸಾರ್ವಭೌಮತೆಯನ್ನ ಸಾರಿ ಹೇಳ್ತಿರೊ ಕಾಫಿನಾಡಿನ ಇಸ್ಮಾಯಿಲ್ ಪಬ್ಲಿಕ್ ಹೀರೋ ಆಗಿದ್ದಾರೆ.
ಚಿಕ್ಕಮಗಳೂರಿನ ಬೀರೂರು ನಿವಾಸಿ ಮಹಮದ್ ಇಸ್ಮಾಯಿಲ್ ಓದಿರೋದು ಪಿಯುಸಿ. ಹೊಟ್ಟೆಪಾಡಿಗೆ ಅಂಗಡಿಯಲ್ಲಿ ಕೆಲಸ ಮಾಡೋ ಇವರು ಟೈಂ ಸಿಕ್ಕಾಗಲೆಲ್ಲಾ ಹಳೆಯ ದೇಗುಲಗಳಿಗೆ ಹೋಗುತ್ತಾರೆ. ಯಾಕಂದ್ರೆ ಇಸ್ಮಾಯಿಲ್ ಸಾಹೇಬ್ರಿಗೆ ಶಾಸನಗಳನ್ನು ಓದೋದು ಅಂದ್ರೆ ಪ್ರಾಣ. ಫ್ರೀ ಟೈಮಲ್ಲೆಲ್ಲಾ ಇವರು ಮಸಿ, ವಿಭೂತಿ, ಬಿಳಿ ಪೇಪರ್ ಇಟ್ಕೊಂಡು ಶಾಸನಗಳನ್ನು ಹುಡುಕಿ ಹೊರಡ್ತಾರೆ. ಮನೆಯಲ್ಲಿದ್ರೂ ಇವರು ಮಾಡೋ ಕೆಲಸ ಓದೋದು. ಬೆಳಗ್ಗೆಯಿಂದ ರಾತ್ರಿ 9ರವರೆಗೆ ಅಂಗಡಿಯಲ್ಲಿ ಕೆಲಸ ಮಾಡೋ ಸಾಹೇಬ್ರು, ಮಧ್ಯರಾತ್ರಿ 1 ಗಂಟೆಯವರೆಗೂ ಕುಳಿತು ಓದುತ್ತಾರೆ.
ಶಾಸನಗಳ ಕುರಿತಂತೆ ಇಸ್ಮಾಯಿಲ್ ಸಾಹೇಬ್ರು ಎಸ್ಜೆಎಂ, ಜೆಎಸ್ಎಸ್, ಸಾಹಿತ್ಯ ಪರಿಷತ್, ಧಾರವಾಡ ಹಾಗೂ ಬೆಂಗಳೂರು ವಿವಿಗಳಿಗೆ ಸುಮಾರು 30 ಲೇಖನ ಬರೆದಿದ್ದಾರೆ. ಚಿದಾನಂದ ಮೂರ್ತಿ ಜೊತೆ ಪತ್ರ ವ್ಯವಹಾರ ಇಟ್ಕೊಂಡಿದ್ದಾರೆ. ಕನ್ನಡ ಎಂ.ಎ ಓದುತ್ತಿರೋರು, ಶಾಸನಗಳ ಅಭ್ಯಾಸ ಮಾಡ್ತಿರೋರು ಇವರಿಂದ ಸಾಕಷ್ಟು ಕಲಿಯುತ್ತಿದ್ದಾರೆ. ಹೊಟ್ಟೆ ತುಂಬಿಸದ ಇವರ ಪ್ರವೃತ್ತಿ ಬಗ್ಗೆ ಮನೆಯವರಿಗೆ ಬೇಸರ ಇದ್ಯಂತೆ. ಆದ್ರೆ ಬೀರೂರಿನ ಮಂದಿಗೆ ಇವರಂದ್ರೆ ಪ್ರೀತಿ ಅಂತ ನಿವಾಸಿ ಗಿರೀಶ್ ಹೇಳಿದ್ದಾರೆ.
ಪ್ರಚಾರಪ್ರಿಯರಲ್ಲದ ಇವರು ಆರಂಭದಲ್ಲಿ ತಮ್ಮ ಲೇಖನಗಳಿಗೆ ‘ಕನ್ನಡತನಯ’ ಎಂದು ಹೆಸರಿಡ್ತಿದ್ರು. ನಂತರ ಸ್ಥಳೀಯರ ಒತ್ತಾಯಕ್ಕೆ ಮಣಿದು ಬೀರೂರು ಇಸ್ಮಾಯಿಲ್ ಹೆಸರಿನಲ್ಲಿ ಲೇಖನ ಬರೆಯುತ್ತಿದ್ದಾರೆ.
https://www.youtube.com/watch?v=tJHM5NVJP-s
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv