ಚಿಕ್ಕಬಳ್ಳಾಪುರ: ಎಲ್ಲಾ ದಾನಗಳಿಗಿಂತ ನೇತ್ರದಾದ ದೊಡ್ಡದು ಅಂತಾರೆ. ಹಾಗೇ ದೊಡ್ಡಬಳ್ಳಾಪುರದಲ್ಲಿ ಒಬ್ಬರು ನೇತ್ರದಾನದ ಅರಿವು ಮೂಡಿಸಿ ಈವರೆಗೂ 800ಕ್ಕೂ ಹೆಚ್ಚು ಮಂದಿಯಿಂದ ನೇತ್ರದಾನ ಮಾಡಿಸಿ ಅಂಧರ ಬಾಳಿನ ಬೆಳಕಾಗಿದ್ದಾರೆ.
ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರು ಮತ್ತು ದೊಡ್ಡಬಳ್ಳಾಪುರದ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿರುವ ಗುರುದೇವ ಎಂ.ಬಿ. ಅವರು ಇವತ್ತಿನ ನಮ್ಮ ಪಬ್ಲಿಕ್ ಹೀರೋ. ದೊಡ್ಡಬಳ್ಳಾಪುರ ನಗರದಲ್ಲೇ ಬರೋಬ್ಬರಿ 14,000 ಜನರಿಂದ ನೇತ್ರದಾನ ಮಾಡುವ ಪ್ರತಿಜ್ಞೆ ಮಾಡಿದ್ದರು. 7 ವರ್ಷಗಳ ಹಿಂದೆ ದೊಡ್ಡಬಳ್ಳಾಪುರದಲ್ಲಿ ಅಭಿಷೇಕ್ ನೇತ್ರಾಲಯ ಶುರುವಾಗಿತ್ತು. ವೈದ್ಯರಾದ ಹರೀಶ್, ಗುರುದೇವ್ ಅವರ ಸಮಾಜಸೇವೆಗೆ ಸಾಥ್ ಕೊಟ್ಟಿದ್ದಾರೆ. ಇವರ ಜೊತೆ ಒಂದಿಷ್ಟು ವೈದ್ಯರು ಕೈಜೋಡಿಸಿ 7 ವರ್ಷಗಳಲ್ಲಿ 814 ಮಂದಿಯಿಂದ ನೇತ್ರದಾನ ಮಾಡಿಸಿ ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಯಾರಾದರೂ ಸತ್ತರೆ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ನೇತ್ರದಾನಕ್ಕೆ ಮನವೊಲಿಸುತ್ತಾರೆ.
ಗುರುದೇವ್ ಅಂಡ್ ಟೀಂಗೆ ರಾಜ್ಕುಮಾರ್ ನೇತ್ರ ಭಂಡಾರ ಹಾಗೂ ನಾರಾಯಣ ನೇತ್ರಾಲಯದವರು ಸಾಥ್ ಕೊಟ್ಟಿದ್ದಾರೆ. ಬೆಂಗಳೂರಿನಿಂದ ಬಂದು ಅವರೇ ಕಣ್ಣುಗಳನ್ನ ತೆಗೆದುಕೊಂಡು ಹೋಗಿ, ಬಡವರಿಗೆ ಅಳವಡಿಸುತ್ತಾರೆ.
7 ವರ್ಷಗಳಲ್ಲಿ 800ಕ್ಕೂ ಹೆಚ್ಚು ಮಂದಿಯಿಂದ ನೇತ್ರದಾನ ಮಾಡಿಸಿ, ತಾಲೂಕು ಮಟ್ಟದಲ್ಲೇ ಅತ್ಯಂತ ನೇತ್ರದಾನ ಮಾಡಿಸಿದ ಹೆಗ್ಗಳಿಕೆ ಗುರುದೇವ್ ತಂಡದ ಪಾಲಾಗಿದೆ.