ಚಿಕ್ಕಬಳ್ಳಾಪುರ: ಆರಕ್ಷಕರು ಬಂದರೆ ಭಯ ಹುಟ್ಟಿಸುವವರು ಎನ್ನುವ ಮಾತಿದೆ. ಆದರೆ ಇದಕ್ಕೆ ವಿರುದ್ಧವಾಗಿ ಚಿಕ್ಕಬಳ್ಳಾಪುರದ ಎಎಸ್ಐ ನಂಜುಂಡಯ್ಯ ಅವರು ಕೇವಲ ಠಾಣೆಯಲ್ಲಿ ಮಾತ್ರ ಅಲ್ಲ, ಮೂಕಪ್ರಾಣಿಗಳೂ ಇವರು ಪ್ರೀತಿ ತೋರಿಸುತ್ತಿದ್ದಾರೆ.
ಎಚ್. ನಂಜುಂಡಯ್ಯ ಅವರು ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕು ದ್ವಾರಗಾನಹಳ್ಳಿ ನಿವಾಸಿವಾಗಿದ್ದು, ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಡಿಸಿಆರ್ ಬಿ ಹಾಗೂ ಅಪರಾಧ ಶಾಖೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕರ್ತವ್ಯದಲ್ಲಿ ಎಷ್ಟು ನಿಷ್ಠರೋ ಅಷ್ಟೇ ಮಾನವತಾವಾದಿ. ನಗರದ ಹೊರವಲಯದ ಚದಲಪುರದ ಬಳಿ ಇದ್ದ ಎಸ್ಪಿ ಕಚೇರಿಗೆ ಪ್ರತಿನಿತ್ಯ ಊಟಕ್ಕಾಗಿ ಬರುವ 30ಕ್ಕೂ ಹೆಚ್ಚು ಕೋತಿಗಳು, ನಾಯಿಗಳಿಗೆ ಬಾಳೆಹಣ್ಣು, ಬಿಸ್ಕತ್ ಕೊಟ್ಟು ಮಮಕಾರ ಮೆರೆಯುತ್ತಿದ್ದಾರೆ. ಈಗ ಎಸ್ಪಿ ಕಚೇರಿ ಹೊಸ ಕಟ್ಟಡಕ್ಕೆ ಶಿಫ್ಟ್ ಆದರೂ, ಹಳೇ ಎಸ್ಪಿ ಕಚೇರಿಯ ಕ್ವಾರ್ಟರ್ಸ್ ಬಿಡುವು ಸಿಕ್ಕಾಗ ಭಾನುವಾರ ಹೋಗಿ ಕೋತಿ-ನಾಯಿಗಳ ಹಸಿವು ನೀಗಿಸುತ್ತಿದ್ದಾರೆ.
35 ವರ್ಷಗಳ ಸೇವೆಯಲ್ಲಿ ಒಂದೂ ಕಪ್ಪುಚುಕ್ಕಿ ಇಲ್ಲ. ಪೊಲೀಸ್ ಇಲಾಖೆಯ ಪ್ರತಿಯೊಂದು ಮಾಹಿತಿಯನ್ನ ಬೆರಳು ತುದಿಯಲ್ಲಿ ಇಟ್ಟುಕೊಂಡಿರುವ ಇವರು ನಡೆದಾಡುವ ಕೋಶ ಎಂದೇ ಇಲಾಖೆಯಲ್ಲಿ ಖ್ಯಾತರಾಗಿದ್ದಾರೆ. ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೂ ಪಾತ್ರರಾಗಿದ್ದಾರೆ. ಇದೀಗ ರಾಷ್ಟ್ರಪತಿಗಳ ಚಿನ್ನದ ಪದಕಕ್ಕೂ ಅವರ ಹೆಸರನ್ನು ಶಿಫಾರಸು ಮಾಡಿದ್ದೇವೆ ಎಂದು ಚಿಕ್ಕಬಳ್ಳಾಪುರ ಎಸ್.ಪಿ ಕಾರ್ತಿಕ್ ರೆಡ್ಡಿ ಹೇಳಿದ್ದಾರೆ.
ಸೌಮ್ಯ ಸ್ವಭಾವ ನಂಜುಂಡಯ್ಯ ಅವರು ಯಾರಿಂದಲೂ ಕಪ್ ಟೀ ಸಹ ತರಿಸಿಕೊಳ್ಳುವುದಿಲ್ಲ. ಇವರ ದಕ್ಷತೆ, ಸರಳತೆಯಿಂದ ಸಹೋದ್ಯೋಗಿಗಳಿಗೆ ಪ್ರೀತಿಪಾತ್ರರಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv