– ದಾವಣಗೆರೆಯ ರೈತ ದ್ಯಾಮಪ್ಪ ಪಬ್ಲಿಕ್ ಹೀರೋ
ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆ ಮಾಡೋದು ಸುಲಭ ಅಲ್ಲ. ನೀರು, ಸೊಪ್ಪು ಹೀಗೆ ಹಲವು ಸಮಸ್ಯೆ ಎದುರಾಗುತ್ತವೆ. ಆದರೆ ಹೈನುಗಾರಿಕೆಯಲ್ಲಿ ತೊಡಗಿರುವ ದಾವಣಗೆರೆಯ ರೈತರೊಬ್ಬರು ತಂತ್ರಜ್ಞಾನ ಅಳವಡಿಸಿಕೊಂಡು, ಹಸುಗಳಿಗೆ ನೀರಿನ ಸಮಸ್ಯೆ ನೀಗಿಸುವ ಮೂಲಕ ಇದೀಗ ಪಬ್ಲಿಕ್ ಹೀರೋ ಎನಿಸಿಕೊಂಡಿದ್ದಾರೆ.
ದಾವಣಗೆರೆಯ ಹಾಲುವರ್ತಿ ಗ್ರಾಮದ ರೈತ ದ್ಯಾಮಪ್ಪ, ಈ ಭಾಗದಲ್ಲಿ ಹೈಟೆಕ್ ಹೈನುಗಾರಿಕೆ ಮಾಡೋರು ಎಂದೇ ಹೆಸರು ಪಡೆದಿದ್ದಾರೆ. ಹನಿ ನೀರು ಸಹ ವೇಸ್ಟ್ ಆಗಬಾರದು ಎಂಬ ಕಾರಣಕ್ಕೆ ಹೈನುಗಾರಿಕೆಯಲ್ಲಿ ಹೈಟೆಕ್ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ. ಹಸುಗಳ ಶೆಡ್ನಲ್ಲಿ ಆಟೋ ಡ್ರಿಂಕಿಂಗ್ ವ್ಯವಸ್ಥೆ ಮಾಡಿದ್ದಾರೆ. ಶೆಡ್ ಮೇಲೆ ದೊಡ್ಡ ಟ್ಯಾಂಕ್ ಇದ್ದು, ಅಲ್ಲಿಂದ ಒಂದು ಅಡಿ ಉದ್ದ, ಒಂದು ಅಡಿ ಅಗಲದ ನೀರಿನ ಟ್ಯಾಂಕ್ಗೆ ನೀರು ಹರಿಸಲಾಗುತ್ತದೆ. ಅಲ್ಲಿಂದ ಫುಟ್ ವಾಲ್ವ್ ಬಳಸಿ ಕೇಸಿಂಗ್ ಪೈಪ್ಗಳಿಗೆ ನೀರು ತುಂಬಿಸಲಾಗುತ್ತದೆ. ಹಸುವೊಂದು ಎಷ್ಟು ನೀರು ಕುಡಿದು ಖಾಲಿ ಮಾಡುತ್ತದೆಯೋ ಅಷ್ಟೂ ಮತ್ತೆ ಸಂಗ್ರಹವಾಗುತ್ತೆ.
ಬರದ ನಾಡಾಗಿದ್ರೂ ದ್ಯಾಮಪ್ಪನ ತೋಟದಲ್ಲಿ ನೀರಿಗೆ ಬರ ಇಲ್ಲ. 10 ಗಂಟೆ ಜಾಗದಲ್ಲಿ ಹೊಂಡ ನಿರ್ಮಿಸಿ, ಮಳೆ ನೀರನ್ನು ಸಂಗ್ರಹಿಸುವ ದ್ಯಾಮಪ್ಪ ತಮ್ಮ 11 ಎಕರೆ ತೋಟಕ್ಕೆ ನೀರಿನ ಬರ ಇಲ್ಲದಂತೆ ನೋಡಿಕೊಂಡಿದ್ದಾರೆ. ಫಾರಂನಲ್ಲಿರುವ 20ಕ್ಕೂ ಹೆಚ್ಚು ಹಸುಗಳಿಗೂ ನೀರಿನ ಸಮಸ್ಯೆ ಇಲ್ಲದಂತೆ ಮಾಡಿದ್ದಾರೆ.
ತಂತ್ರಜ್ಞಾನ ಬಳಸಿಕೊಂಡು ಒಂದು ಕಡೆ ಹಸುಗಳು, ಮತ್ತೊಂದು ಕಡೆ ತೋಟವನ್ನು ಹಸಿರಾಗಿಟ್ಟ ದ್ಯಾಮಪ್ಪ ಇತರ ರೈತರಿಗೆ ಮಾದರಿಯಾಗಿದ್ದಾರೆ.