ಚಿಕ್ಕಬಳ್ಳಾಪುರ: ನಡುರಸ್ತೆಯಲ್ಲೆ 70 ವರ್ಷದ ವೃದ್ಧರೊಬ್ಬರ ಮೇಲೆ ಕರ್ತವ್ಯ ನಿರತ ಪಿಎಸ್ಐ ಕಪಾಳಮೋಕ್ಷ ಮಾಡಿರುವ ಘಟನೆ ಜಿಲ್ಲೆಯ ಚಿಂತಾಮಣಿ ನಗರದ ಚೇಳೂರು ಸರ್ಕಲ್ ಬಳಿ ನಡೆದಿದೆ.
ಚಿಂತಾಮಣಿ ನಗರ ಠಾಣೆಯ ಕ್ರೈಂ ಪಿಎಸ್ಐ ನರಸಿಂಹಮೂರ್ತಿ ಅವರು ನಗರದ ವಿನೋಭಾ ಕಾಲೋನಿಯ ನಿವಾಸಿ ನಾರಾಯಣಪ್ಪ ಎಂಬವರ ಮೇಲೆ ಹಲ್ಲೆ ಮಾಡಿದ್ದಾರೆ. ವೃದ್ಧನ ಮೇಲೆ ಹಲ್ಲೆ ಮಾಡುತ್ತಿದ್ದಂತೆ ಪಿಎಸ್ಐ ವಿರುದ್ಧವೇ ತಿರುಗಿಬಿದ್ದ ವೃದ್ಧನ ಸಂಬಂಧಿಕರು ಹೃದಯ ಸಂಬಂಧಿ ರೋಗಿ ಮೇಲೆಯೇ ಹಲ್ಲೆ ಮಾಡ್ತೀರಾ ಅಂತ ಪಿಎಸ್ಐ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆಯೂ ನಡೆದಿದೆ.
ನಡೆದಿದ್ದೇನು?: ನಾರಾಯಣಪ್ಪ ಅವರ ಮಗ ಬೈಕ್ನಲ್ಲಿ ಹೋಗುವಾಗ ಚೇಳೂರು ವೃತ್ತದಲ್ಲಿ ಸಿಗ್ನಲ್ ಜಂಪ್ ಮಾಡಿದ ಹಿನ್ನೆಲೆ ಬೈಕನ್ನ ಪೊಲೀಸರು ವಶಕ್ಕೆ ಪಡೆದಿದ್ರು. ಹೀಗಾಗಿ ಮಗನ ಪರವಾಗಿ ಮಾತನಾಡಲು ಸ್ಥಳಕ್ಕೆ ನಾರಾಯಣಪ್ಪ ಬಂದಿದ್ದರು. ಆದ್ರೆ ಈ ವೇಳೆ ಸ್ಥಳಕ್ಕೆ ಬಂದ ಪಿಎಸ್ಐ ನರಸಿಂಹಮೂರ್ತಿ ಹಾಗೂ ವೃದ್ಧ ನಾರಾಯಣಪ್ಪ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ನಾರಾಯಣಪ್ಪ ಪಿಎಸ್ಐ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರಿಂದ ಪಿಎಸ್ಐ ನರಸಿಂಹಮೂರ್ತಿ ಹಲ್ಲೆ ಮಾಡಿದರು ಎಂದು ಹೇಳಲಾಗುತ್ತಿದೆ.
ನಾರಾಯಣಪ್ಪ ಅವರ ಮೇಲೆ ಹಲ್ಲೆ ಮಾಡುತ್ತಿದ್ದಂತೆ ಕೆಂಡಾಮಂಡಲರಾದ ವೃದ್ಧನ ಸಂಬಂಧಿಕರು ಪಿಎಸ್ಐ ಅವರಿಗೆ ದಿಗ್ಭಂಧನ ಹಾಕಿ ತರಾಟೆಗೆ ತೆಗೆದುಕೊಂಡರು. ಕೆಲಕಾಲ ಚೇಳೂರು ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬಂದ ಡಿವೈಎಸ್ಪಿ ಅವರು ಪಿಎಸ್ಐ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು. ಹಲ್ಲೆಗೊಳಾದ ನಾರಾಯಾಣಪ್ಪ ಅವರನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.