ಕಲಬುರಗಿ: ಪಿಎಸ್ಐ(PSI) ಪರೀಕ್ಷಾ ಅಕ್ರಮದ ಸಿಐಡಿ ತನಿಖೆ ತೀವ್ರಗೊಳಿಸಿದೆ. ವಿಚಾರಣೆಗೆ ಹಾಜರಾಗುವಂತೆ ಪಿಎಸ್ಐ ಆಯ್ಕೆ ಪಟ್ಟಿಯಲ್ಲಿದ್ದ 545 ಅಭ್ಯರ್ಥಿಗಳಿಗೆ ನೋಟಿಸ್ ನೀಡಿದೆ. ಬರುವಾಗ ಓಎಂಆರ್ ಶೀಟ್ (OMR Sheet) ನ ಕಾರ್ಬನ್ ಕಾಪಿಯನ್ನು ಕಡ್ಡಾಯವಾಗಿ ತರಬೇಕು ಎಂದು ತಿಳಿಸಿದೆ.
ಅಕ್ರಮದಲ್ಲಿ ಪಾಲ್ಗೊಂಡ ಅಭ್ಯರ್ಥಿಗಳನ್ನು ಪತ್ತೆ ಹಚ್ಚಲು ಸಿಐಡಿ ಈ ತಂತ್ರ ರೂಪಿಸಿದೆ. ಬುಧವಾರ ಬೆಳಗ್ಗೆಯಿಂದ ಬ್ಯಾಚ್ವೈಸ್ ವಿಚಾರಣೆ ಶುರುವಾಗಲಿದೆ. ಕಲಬುರಗಿ ಮಾತ್ರವಲ್ಲ, ಬೆಂಗಳೂರಿನ ಖಾಸಗಿ ಕಾಲೇಜ್ನಲ್ಲೂ ಪರೀಕ್ಷಾ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. ಇನ್ನೂ, ಈ ಪರೀಕ್ಷಾ ಅಕ್ರಮ ಬಯಲಾಗಿದ್ದೇ ಕುತೂಹಲಕಾರಿ ಅಂಶ. ಇದನ್ನೂ ಓದಿ: 35 ಲಕ್ಷ ಪಾವತಿ ಮಾಡಿ 5 ಲಕ್ಷ ಸಿಗದೇ ಪೇಚಾಡಿದ – ಆಪ್ತ ಸ್ನೇಹಿತನಿಂದಲೇ ಪಿಎಸ್ಐ ಅಕ್ರಮ ಲೀಕ್ ಆಗಿದ್ದು ಹೇಗೆ?
ಲಂಚ ಕೊಟ್ಟು ಪಿಎಸ್ಐ ಆಗಲು ನೋಡಿದ್ದ ವೀರೇಶ್ನ ಓಎಂಆರ್ ಶೀಟ್ ಹೊರಗೆ ಬರಲು, ಆತನ ಗೆಳೆಯನೇ ಕಾರಣ.. ವೀರೇಶ್ಗೆ ಗೆಳೆಯ ಡೀಲ್ ಮಾಸ್ಟರ್ ಪರಿಚಯಿಸಿದ್ದ. ಪರೀಕ್ಷೆ ಮುಗಿದು ಆಯ್ಕೆ ಪಟ್ಟಿಯೂ ಹೊರಬಿದ್ದಿತ್ತು. ವೀರೇಶ್ ಸೆಲೆಕ್ಟ್ ಆಗಿದ್ದ. ಆಗ ನೀನು ಪಿಎಸ್ಐ ಆಗ್ತಿರೋದಕ್ಕೆ ನಾನೇ ಕಾರಣ ನಂಗೆ ಐದು ಲಕ್ಷ ಕೊಡು ಎಂದು ವೀರೇಶ್ಗೆ ಗೆಳೆಯ ದುಂಬಾಲು ಬಿದ್ದಿದ್ದ. ಆದರೆ ವೀರೇಶ್ ಬಳಿ ಅಷ್ಟು ದುಡ್ಡಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಆ ಗೆಳೆಯ, ಇತರೆ ಅಭ್ಯರ್ಥಿಗಳ ಜೊತೆ ವಿಷಯ ಸೋರಿಕೆ ಮಾಡಿದ್ದ.
ಕೊನೆಗೆ ಇದು ತನಿಖೆಗೂ ದಾರಿಮಾಡಿಕೊಡ್ತು. ಇನ್ನು ಬಂಧಿತರಲ್ಲಿ ಕಲಬುರಗಿ ಬಿಜೆಪಿ ಘಟಕದ ಯುವ ಮುಖಂಡ ಅರುಣ್ ಪಾಟೀಲ್ ಕೂಡ ಸೇರಿದ್ದಾನೆ. ಅರುಣ್ ಪಾಟೀಲ್ ಬಂಧನದಿಂದಾಗಿಯೇ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ನಡೆಸ್ತಿದ್ದ ಪರೀಕ್ಷಾ ದಂಧೆ ಬಯಲಾಗಿದೆ. ಆದ್ರೆ, ಇವತ್ತು ಕೂಡ ಸಚಿವ ಅಶೋಕ್ ಸೇರಿ ಬಿಜೆಪಿ ನಾಯಕರೆಲ್ಲಾ, ಆಕೆ ನಮ್ಮ ಪಕ್ಷದವರಲ್ಲ ಅಂತಲೇ ಹೇಳ್ತಿದ್ದಾರೆ. ಸಚಿವ ಬೈರತಿ ಬಸವರಾಜ್ ಅವ್ರಂತೂ, ಮೊದಲು ಆರೋಪ ಸಾಬೀತಾಗಲಿ ಎಂದಿದ್ದಾರೆ. ಇನ್ನು, ಹೈಕೋರ್ಟ್ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಯಬೇಕು ಅಂತಾ ಕಾಂಗ್ರೆಸ್ ಒತ್ತಾಯಿಸಿದೆ.