ಬಳ್ಳಾರಿ: ಕೇಂದ್ರ ಸರ್ಕಾರದ ವಿರುದ್ಧ ಕರೆ ನೀಡಿದ್ದ ಭಾರತ್ ಬಂದ್ ಎರಡನೇಯ ದಿನವಾದ ಇಂದು ಕೂಡ ಬಳ್ಳಾರಿಯಲ್ಲಿ ಮುಂದುವರಿದಿದೆ. ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಶವಯಾತ್ರೆಯ ಮೂಲಕ ವಿನೂತನವಾಗಿ ಪ್ರತಿಭಟನೆ ಕೈಗೊಂಡಿದ್ದಾರೆ.
ಬಂದ್ ಕರೆ ಹಿನ್ನೆಲೆಯಲ್ಲಿ ಇಂದು ಸಹ ಬಳ್ಳಾರಿ ಜಿಲ್ಲಾ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಬಂದ್ ಪ್ರತಿಭಟನೆ ತೀವ್ರಗೊಂಡಿದೆ. ಬಂದ್ ವೇಳೆ ನಾಲ್ಕು ಸಾರಿಗೆ ಬಸ್ ಗಳಿಗೆ ಕಲ್ಲು ತೂರಿದ ಪರಿಣಾಮ ಸಾರಿಗೆ ಬಸ್ ಗಳ ಸಂಚಾರ ಸ್ಥಗಿತಗೊಂಡಿದೆ. ಇಂದು ಮುಂಜಾನೆ 6-7 ಗಂಟೆಯವರೆಗೆ ಬಸ್ ಸಂಚಾರ ಆರಂಭವಾಗಿತ್ತು. ಆದ್ರೆ ಕಳೆದ ರಾತ್ರಿಯಿಂದ ನಾಲ್ಕು ಬಸ್ ಗಳ ಮೇಲೆ ಕಲ್ಲು ತೂರಿದ ಪರಿಣಾಮ ಸಾರಿಗೆ ಬಸ್ ಚಾಲಕರು ಬಸ್ ಗಳನ್ನು ರೋಡಿಗಿಳಿಸಿಲ್ಲ.
ಕಾರ್ಮಿಕ ಸಂಘಟನೆಗಳ ಮುಖಂಡರು ಇಂದು ಸಹ ಕೆಲ ಗಂಟೆಗಳ ಕಾಲ ಸಾರಿಗೆ ಬಸ್ ಡಿಪೋ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಡಿಪೋದಿಂದ ರಾಯಲ್ ವೃತ್ತದ ವರಗೆ ಕೇಂದ್ರ ಸರ್ಕಾರದ ಅಣಕು ಶವಯಾತ್ರೆ ನಡೆಸಿ ಪ್ರತಿಕೃತಿಗೆ ಬೆಂಕಿ ಹಚ್ಚಿದರು. ಅಲ್ಲದೇ ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರು ನಗರದ ರಾಯಲ್ ವೃತ್ತದಲ್ಲಿ ಅಡುಗೆ ಮಾಡುವ ಮೂಲಕ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿದರು. ಮಂಗಳವಾರ ಇಡೀ ದಿನ ಬಂದ್ ಆಗಿದ್ದ ಅಂಗಡಿ ಮುಂಗಟ್ಟುಗಳು ಇಂದು ಬಹುತೇಕವಾಗಿ ತೆರೆದಿದ್ದು ಸ್ವಲ್ಪಮಟ್ಟಿಗೆ ಜನಜೀವನ ಯಥಾವತ್ತಾಗಿ ಸಾಗಿದೆ.
ಇಂದಿನ ಬಂದ್ ವೇಳೆ ಏನೇ ಅನಾಹುತ ಕಾರ್ಯ ನಡೆದ್ರೂ ಅದಕ್ಕೆ ಸರ್ಕಾರವೇ ನೇರ ಹೊಣೆಯೆಂದು ಕೆಎಸ್ ಆರ್ ಟಿಸಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆದಿ ಮೂರ್ತಿ ಎಚ್ಚರಿಕೆ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv