ಇಂಫಾಲ: ಮಣಿಪುರದ (Manipur) ಜಿರಿಬಾಮ್ ಜಿಲ್ಲೆಯಲ್ಲಿ ಒತ್ತೆಯಾಳಾಗಿದ್ದ ಆರು ಜನರ ಹತ್ಯೆಯನ್ನು ಖಂಡಿಸಿ ಇಂಫಾಲನಲ್ಲಿ (Imphal) ಪ್ರತಿಭಟನೆ ತೀವ್ರಗೊಂಡಿದೆ. ಪ್ರತಿಭಟನಾಕಾರರು ಇಬ್ಬರು ಮಣಿಪುರದ ಸಚಿವರು ಮತ್ತು ಮೂವರು ಶಾಸಕರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.
ಪ್ರತಿಭಟನೆ ನಡೆಯುತ್ತಿರುವ ಪಶ್ಚಿಮ ಇಂಪಾಲ, ಪೂರ್ವ ಇಂಪಾಲ, ಬಿಷ್ಣುಪುರ್, ತೌಬಲ್, ಕಾಕ್ಚಿಂಗ್, ಕಾಂಗ್ಪೋಕ್ಪಿ ಮತ್ತು ಚುರಾಚಂದ್ಪುರದಲ್ಲಿ ಎರಡು ದಿನಗಳ ಕಾಲ ಅಧಿಕಾರಿಗಳು ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ. ಅಲ್ಲದೇ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸಪಂ ರಂಜನ್ ಅವರ ಲ್ಯಾಂಫೆಲ್ ಸನಕೀತೆಲ್ ಪ್ರದೇಶದಲ್ಲಿರುವ ನಿವಾಸಕ್ಕೆ ಪ್ರತಿಭಟನಾಕಾರರ ಗುಂಪು ನುಗ್ಗಿದೆ. ಇಂಫಾಲ್ ಪಶ್ಚಿಮ ಜಿಲ್ಲೆಯ ಸಗೋಲ್ಬಂದ್ ಪ್ರದೇಶದಲ್ಲಿ ಪ್ರತಿಭಟನಾಕಾರರು ಬಿಜೆಪಿ ಶಾಸಕ ಆರ್ಕೆ ಇಮೊ ಅವರ ನಿವಾಸದ ಮುಂದೆ ಸೇರಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ, ಹತ್ಯೆಗೈದವರನ್ನು ಬಂಧಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಕೇಶಾಮ್ಥಾಂಗ್ ಕ್ಷೇತ್ರದ ಸ್ವತಂತ್ರ ಶಾಸಕ ಸಪಂ ನಿಶಿಕಾಂತ ಸಿಂಗ್ ಅವರನ್ನು ನಿವಾಸದಲ್ಲಿ ಭೇಟಿ ಮಾಡಲು ಬಂದಿದ್ದ ಪ್ರತಿಭಟನಾಕಾರರು, ಶಾಸಕರು ರಾಜ್ಯದಲ್ಲಿ ಇಲ್ಲ ಎಂದು ತಿಳಿಸಿದ ನಂತರ ಅವರ ಒಡೆತನದ ಸ್ಥಳೀಯ ಪತ್ರಿಕೆಯ ಕಚೇರಿ ಕಟ್ಟಡವನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ.
ಶಂಕಿತ ಕುಕಿ ಬಂಡುಕೋರು 8 ತಿಂಗಳ ಮಗು ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಐದು ದಿನಗಳ ನಂತರ ಆರು ಶವಗಳು ಪತ್ತೆಯಾಗಿದ್ದವು. ಇದನ್ನೂ ವಿರೋಧಿಸಿ ಮಣಿಪುರದಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿದೆ.