ಬೆಳಗಾವಿ: ಜಿಲ್ಲೆಯಲ್ಲಿ ನೆರೆ ಸಂಭವಿಸಿ 30 ತಿಂಗಳು ಕಳೆದಿವೆ. ಇಲ್ಲಿಯವರೆಗೂ ಪರಿಹಾರ ನೀಡದ ಅಧಿಕಾರಿಗಳ ವಿರುದ್ಧ ನೆರೆ ಸಂತ್ರಸ್ತರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ್ದಾರೆ.
ಪರಿಹಾರ ನೀಡದ ಅಧಿಕಾರಿಗಳು ಪರಿಹಾರದ ಆದೇಶ ನೀಡಿ ಇಲ್ಲವೇ ಸಾಯಲು ವಿಷ ನೀಡಿ ಎಂದು ನೂರಾರು ನೆರೆ ಸಂತ್ರಸ್ತರು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ನೇತೃತ್ವದಲ್ಲಿ ಜಿಲ್ಲಾ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಹೀಗೆ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.
2019ರಲ್ಲಿ ಘಟಪ್ರಭಾ ನದಿಯ ಪ್ರವಾಹದಿಂದ ಗೋಕಾಕ್ ತಾಲೂಕಿನ ಅಡಿಬಟ್ಟಿ, ಚಿಗಡೊಳ್ಳಿ, ಮೆಳವಂಕಿ, ಕಲಾರಕೊಪ್ಪ, ಹಡಗಿನಾಳ, ಉದಗಟ್ಟಿ, ಲೋಳಸೂರ, ನಲ್ಲಾನಟ್ಟಿ, ಬಸಳೀಗುಂದಿ, ಬಳೋಬಾಳ, ಬೀರನಗಡ್ಡಿ, ತಳಕಟ್ನಾಳ ಹಾಗೂ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿ.ಜಿ, ಪುಲಗಡ್ಡಿ, ತಿಗಡಿ, ರಂಗಾಪುರ, ಹುಣಶ್ಯಾಳ ಪಿ.ವಾಯ್, ಡವಳೇಶ್ವರ, ಅರಳಿಮಟ್ಟಿ, ಅವರಾದಿ ಸೇರಿದಂತೆ ಇತರ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದ್ದವು. ಪ್ರವಾಹದಲ್ಲಿ ಗ್ರಾಮಗಳಲ್ಲಿನ ಹಲವು ಮನೆಗಳಿಗೆ ಹಾನಿಯಾಗಿದ್ದವು. ಇದನ್ನೂ ಓದಿ: ಪಲಾವ್ ತಿಂದು ಏರ್ ಕಂಡೀಷನ್ ಹಾಕಿ ಧರಣಿ ಮಾಡೋದಲ್ಲ: ವಿಶ್ವನಾಥ್
ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸರ್ಕಾರ ಪರಿಹಾರ ಘೋಷಿಸಿತ್ತು. ಆದರೆ ಪ್ರವಾಹ ಘಟಿಸಿ 30 ತಿಂಗಳುಗಳಾಗಿದ್ದರೂ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹರ್ಷ ಕುಟುಂಬಕ್ಕೆ 25ಲಕ್ಷ ರೂ. ಪರಿಹಾರ ನೀಡಿ-ಸರ್ಕಾರಕ್ಕೆ ಶ್ರೀರಾಮ ಸೇನೆ ಒತ್ತಾಯ
ನೆರೆ ಪರಿಹಾರ ವಿತರಣೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಭ್ರಷ್ಟಾಚಾರ ಕುರಿತು ಸಮಗ್ರ ತನಿಖೆ ನಡೆಸಬೇಕು. ಮನೆ ಪರಿಹಾರದ ಆದೇಶವನ್ನು ತಕ್ಷಣ ನೀಡಬೇಕು. ನೆರೆ ಪರಿಹಾರ ಮಜೂರಾದ ಮನೆಗಳಿಗೆ ಸಮಯಕ್ಕೆ ಸರಿಯಾಗಿ ಪರಿಹಾರ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.