ಬಳ್ಳಾರಿ: ವಿಶ್ವ ವಿಖ್ಯಾತ ಹಂಪಿಯ ಸ್ಮಾರಕಗಳನ್ನು ಧ್ವಂಸಗೊಳಿಸಿರುವುದನ್ನು ಖಂಡಿಸಿ ಹಂಪಿಯಲ್ಲಿಂದು ವಿಜಯನಗರ ಹಾಗೂ ಮೈಸೂರು ಮಹಾರಾಜರು ಪ್ರತಿಭಟನೆ ನಡೆಸಿದ್ದಾರೆ.
ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ ಮೈಸೂರಿನ ಯುವರಾಜ ಯದುವೀರ್ ಹಾಗೂ ವಿಜಯನಗರದ ಕೃಷ್ಣದೇವರಾಜರು ಪ್ರತಿಭಟನೆಯಲ್ಲಿ ಭಾಗವಹಿಸಿ ಸ್ಮಾರಕ ಧ್ವಂಸಗೊಳಿಸಿರುವುದನ್ನು ಖಂಡಿಸಿದ್ದಾರೆ. ಕಮಲಾಪುರದ ಪುರಾತತ್ವ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಮಹಾರಾಜರು ಹಾಗೂ ನೂರಾರು ಸ್ಥಳೀಯರು, ಹಂಪಿಯಲ್ಲಿ ಸ್ಮಾರಕಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಮೈಸೂರಿನ ಯುವರಾಜ ಯದುವೀರ್ ಅವರು ಹಂಪಿಯನ್ನು ಉಳಿಸುವ ಕೆಲಸವನ್ನು ನಾವೆಲ್ಲ ಮಾಡಬೇಕಾಗಿದೆ. ಪುರಾತತ್ವ ಇಲಾಖೆ ಈ ಬಗ್ಗೆ ಇನ್ನಷ್ಟು ಕಾರ್ಯಪ್ರವೃತ್ತರಾಗಬೇಕು, ನಮ್ಮ ಮೈಸೂರಿನಲ್ಲಿಯೂ ಸ್ಮಾರಕಗಳಿಗೆ ಧಕ್ಕೆಯಾಗುತ್ತಿವೆ. ಸ್ಮಾರಕಗಳನ್ನು ಉಳಿಸಲು ಜನರ ಸಹಭಾಗಿತ್ವ ಪ್ರಮುಖವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಕಿಡಿಗೇಡಿಗಳ ಅಟ್ಟಹಾಸ – ಹಂಪಿಯ ಐತಿಹಾಸಿಕ ಸ್ಮಾರಕಗಳನ್ನ ಕೆಡವಿದ ವಿಡಿಯೋ ವೈರಲ್..!
ಯದುವೀರ್ ಅವರು ಭಾನುವಾರ ಐತಿಹಾಸಿಕ ಹಂಪಿಗೆ ಭೇಟಿ ನೀಡಿ ಪ್ರಸಿದ್ಧ ಸ್ಮಾರಕಗಳನ್ನು ವೀಕ್ಷಣೆ ಮಾಡಿದ್ದರು. ಕಮಲಾಪುರ ಹಾಗೂ ತಳವಾರಘಟ್ಟ ರಸ್ತೆ ಮೂಲಕ ಆಗಮಿಸಿದ ಯದುವೀರ್ ಗೆಜ್ಜಲ ಮಂಟಪ, ಕುದುರೆ ಗೊಂಬೆ ಮಂಟಪ, ವಿಠಲ ಬಜಾರ್, ಪುಷ್ಕರಣಿ, ಪ್ರಸಿದ್ಧ ವಿಜಯವಿಠಲ ದೇವಸ್ಥಾನದಲ್ಲಿ ಕಲ್ಲಿನ ರಥ ಮುಂದೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಒಡೆಯರ್ ನೋಡಿ ಪ್ರವಾಸಿಗರು ಅವರ ಜೊತೆ ಫೋಟೋ, ಸೆಲ್ಫಿ ತಗೆದುಕೊಂಡಿದ್ದಾರೆ. ಇದನ್ನೂ ಓದಿ: ಕಿಡಿಗೇಡಿಗಳಿಂದ ಸ್ಮಾರಕ ಧ್ವಂಸ – ಎಸ್ಪಿಯಿಂದ ಸ್ಥಳ ಪರಿಶೀಲನೆ
ಇದಾದ ಬಳಿಕ ಯದುವೀರ್ ಅವರು ಸಂಗೀತ ಮಂಟಪಕ್ಕೆ ತೆರಳಿ, ಸಪ್ತಸ್ವರ ಕಂಬಗಳಿಂದ ನಾದ ಆಲಿಸಿ ಖುಷಿಪಟ್ಟರು. ನಂತರ ತುಂಗಭದ್ರಾ ನದಿ ತೀರದಲ್ಲಿರುವ ಪುರಂದರ ಮಂಟಪ ವೀಕ್ಷಣೆ ಮಾಡಿದ್ದಾರೆ. ಯದುವೀರ್ ಅವರ ಜೊತೆ ಕನ್ನಡ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಸಿ.ಎಸ್.ವಾಸುದೇವನ್ ಮತ್ತಿತರರು ಇದ್ದರು. ಯದುವೀರ್ ಅವರು ಹಂಪಿಗೆ ಆಗಾಗ ಭೇಟಿ ನೀಡುತ್ತಾರೆ. ಈ ಬಾರಿಯೂ ಹಂಪಿ ಪ್ರಸಿದ್ಧ ಸ್ಮಾರಕ ಸೇರಿದಂತೆ ಪ್ರಕೃತಿ ಸೊಬಗನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv