– 30 ಕಾರ್ಯಕರ್ತರಿಗೆ ನೋಟಿಸ್
– ತನಿಖಾಧಿಕಾರಿ ತರೀಕೆರೆಯವರೇ ಯಾಕೆ? – ಬಿಜೆಪಿ ಪ್ರಶ್ನೆ
ಚಿಕ್ಕಮಗಳೂರು: ಡಿಸೆಂಬರ್ 19ರಂದು ಬೆಳಗಾವಿಯ ಸುವರ್ಣಸೌಧದಲ್ಲಿ ಸಿ.ಟಿ.ರವಿ (CT Ravi) ಮೇಲಿನ ಹಲ್ಲೆ ಯತ್ನ ಹಾಗೂ ಬಂಧನವನ್ನು ಖಂಡಿಸಿ ಚಿಕ್ಕಮಗಳೂರಿನಲ್ಲಿ (Chikkamagaluru) ಪ್ರತಿಭಟನೆ ನಡಸಿದ್ದ 30ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಪೊಲೀಸರು (Police) ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಡಿ.19ರಂದು ರಾಷ್ಟ್ರೀಯ ಹೆದ್ದಾರಿ 173 ತಡೆದು ಪ್ರತಿಭಟನೆ ನಡೆಸಿದ್ದರು. 20 ರಂದು ಚಿಕ್ಕಮಗಳೂರು (Chikkamagaluru) ನಗರ ಬಂದ್ಗೆ ಕರೆ ನೀಡಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ನಗರದಲ್ಲಿ ಅಲ್ಲಲ್ಲೇ ಬೈಕ್-ಟಯರ್ಗಳಿಗೆ ಬೆಂಕಿ ಹಾಕಲಾಗಿತ್ತು, ಗಲಾಟೆ ಕೂಡ ನಡೆದಿತ್ತು. ಅಂದು ಪೊಲೀಸರು ಸುಮಾರು 100ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆದು ಚಿಕ್ಕಮಗಳೂರು ನಗರದಿಂದ ಸುಮಾರು 80 ಕಿ.ಮೀ. ದೂರದ ಕಡೂರು ತಾಲೂಕಿನ ಸಿಂಗಟಗೆರೆ ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿ ಬಿಡುಗಡೆ ಮಾಡಿದ್ದರು.
ಇಂದು ತರೀಕೆರೆ ಪೊಲೀಸರು (Tarikere Police) 30ಕ್ಕೂ ಹೆಚ್ಚು ಜನರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. 100 ರಲ್ಲಿ ಹೆಸರು ತಿಳಿದ 30ಕ್ಕೂ ಹೆಚ್ಚು ಜನರಿಗೆ ನೋಟಿಸ್ ನೀಡಿ ಜನವರಿ 4 ರಂದು ತರೀಕೆರೆ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ:ʼಇಂಡಿಯಾʼಗೆ ಬನ್ನಿ, ಬಾಗಿಲು ಸದಾ ತೆರೆದಿದೆ: ನಿತೀಶ್ಗೆ ಲಾಲೂ ಆಫರ್
ಬಿಜೆಪಿ ಕಾರ್ಯಕರ್ತರು ಪೊಲೀಸರ ನೋಟಿಸ್ ವಿರುದ್ಧ ಕಿಡಿಕಾರಿದ್ದು ಅಸಮಾಧಾನ ಹೊರಹಾಕಿದ್ದಾರೆ. ಪ್ರತಿಭಟನೆ ನಡೆಸಿ ವಶಕ್ಕೆ ಪಡೆದು ಪ್ರಕರಣ ದಾಖಲಾಗಿದ್ದು ಎಲ್ಲಾ ಚಿಕ್ಕಮಗಳೂರು ನಗರ ಠಾಣೆಯಲ್ಲಿ. ಆದರೆ ವಿಚಾರಣೆ ತರೀಕೆರೆಯಲ್ಲೇ ಯಾಕೆ? ತನಿಖಾಧಿಕಾರಿ ತರೀಕೆರೆಯವರೇ ಯಾಕೆ ಎಂದು ಬಿಜೆಪಿ ಕಾರ್ಯಕರ್ತರು ಪ್ರಶ್ನಿಸಿ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. ಸರ್ಕಾರ ಹಾಗೂ ಪೊಲೀಸರು ಹೋರಾಟಗಾರರನ್ನ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಮಾಜಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ, ವೆಂಕಟೇಶ್, ಕೇಶವ, ಸಚಿನ್, ಅಂಕಿತ ಸೇರಿ ಹಲವರ ಮೇಲೆ ಕೇಸ್ ದಾಖಲಾಗಿತ್ತು. ಇದೀಗ, ಪೊಲೀಸರು 30 ಜನರಿಗೆ ನೋಟೀಸ್ ನೀಡಿ ಜನವರಿ 4ಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ.