ರಾಯಚೂರು: ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರು ವಿದ್ಯಾರ್ಥಿನಿಯರಿಗೆ ಸ್ಥೈರ್ಯ ತುಂಬುವ ಜೊತೆಗೆ ರಕ್ಷಣೆಗೆ ಮುಂದಾಗಿದ್ದಾರೆ.
ಪೊಲೀಸರು ನಾನಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬುತ್ತಿದ್ದಾರೆ. ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗಾಗಿ ಪಿಂಕ್ ದೂರು ಪೆಟ್ಟಿಗೆಗಳನ್ನು ಅಳವಡಿಸುವ ಮೂಲಕ ಸಮಸ್ಯೆಗಳನ್ನು ಆಲಿಸಲು ಮುಂದಾಗಿದ್ದಾರೆ.
ಮಹಿಳಾ ಠಾಣಾ ಪೊಲೀಸರು ಕಾಲೇಜುಗಳ ಸುತ್ತ ಹೆಚ್ಚು ಗಸ್ತು ಸುತ್ತುತ್ತಿದ್ದಾರೆ. ಎರಡು ದಿನಗಳಿಗೆ ಒಂದು ಬಾರಿ ಪೆಟ್ಟಿಗೆಗಳನ್ನು ತೆರೆದು ವಿದ್ಯಾರ್ಥಿನಿಯರ ದೂರುಗಳಿಗೆ ಸ್ಪಂದಿಸಲು ಜಿಲ್ಲಾ ಪೊಲೀಸರು ಮುಂದಾಗಿದ್ದಾರೆ. ಇದು ಕೇವಲ ಘಟನೆಗಳು ನಡೆದಾಗ ಕ್ರಮಕೈಗೊಂಡು ಮುಂದೆ ಮರೆತು ಹೋಗುವಂತಾಗಬಾರದು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಏಪ್ರಿಲ್ 16 ರಂದು ವಿದ್ಯಾರ್ಥಿನಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಪೊಲೀಸರು ಡೆತ್ನೋಟ್ ನೋಡಿ ಇದು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿದ್ದರು. ಬಳಿಕ ಮೃತ ವಿದ್ಯಾರ್ಥಿನಿ ತಾಯಿ ಇದು ಆತ್ಮಹತ್ಯೆಯಲ್ಲ. ನನ್ನ ಮಗಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಮೃತ ವಿದ್ಯಾರ್ಥಿನಿ ಗೆಳೆಯ ಸುದರ್ಶನ್ನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.