ಮಂಡ್ಯ: ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಬೆಂಬಲಿಗನ ಒಡೆತನದ ವಸತಿ ಗೃಹದ ಮೇಲೆ ದಾಳಿ ನಡೆಸಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಬಾಂಗ್ಲಾ ಮೂಲದ ಮೂವರು ಯುವತಿಯರನ್ನು ರಕ್ಷಣೆ ಮಾಡಿರುವ ಘಟನೆ ಮಂಡ್ಯದ ಮದ್ದೂರಿನಲ್ಲಿ ನಡೆದಿದೆ.
ಒಡನಾಡಿ ಸಂಸ್ಥೆಯವರು ನೀಡಿದ ದೂರಿನ ಮೇರೆಗೆ ಮೈಸೂರು ಬೆಂಗಳೂರು ಹೆದ್ದಾರಿ ಪಕ್ಕದಲ್ಲೇ ಪ್ರಕೃತಿ ವಸತಿಗೃಹದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಸತತ 5 ಗಂಟೆಗಳ ಕಾಲ ಹುಡುಕಾಟದ ನಂತರ ಗುಹೆ ರೀತಿಯ ರಹಸ್ಯ ಕೊಠಡಿಯಲ್ಲಿ ಯುವತಿಯರನ್ನು ಅಡಗಿಸಿಟ್ಟಿದ್ದು ಪತ್ತೆಯಾಗಿದೆ.
ವಸತಿ ಗೃಹವು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರೊಬ್ಬರ ಸಹೋದರನದ್ದಾಗಿದ್ದು, ಆತ ಸಾರಿಗೆ ಸಚಿವರ ಬೆಂಬಲಿಗ ಎಂದು ಹೇಳಲಾಗುತ್ತಿದೆ. ವಸತಿ ಗೃಹವನ್ನು ಬೇರೆಯವರಿಗೆ ಬಾಡಿಗೆ ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.