ಬೆಳಗಾವಿ: ಕಾಲೇಜು ವಾಟ್ಸಪ್ ಗ್ರೂಪ್ನಲ್ಲಿ ನಿನ್ನ ಮುದ್ದಾಡಬೇಕು ಅನ್ನಿಸುತ್ತಿತ್ತು ಇವತ್ತು ಎಂದು ಕಾಲೇಜು ಪ್ರೊಫೆಸರ್ ಒಬ್ಬ ಬಹಿರಂಗವಾಗಿ ಮಾಡಿರುವ ಸಂದೇಶ ಈಗ ಚರ್ಚೆಗೆ ಗ್ರಾಸವಾಗಿದೆ.
ಜಿಲ್ಲೆಯ ಹುಕ್ಕೇರಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಪ್ರೊಫೆಸರ್ ದೇವರಾಜ ತಳವಾರ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕಿಯರು ಇರುವ ಕಾಲೇಜಿನ ಗ್ರೂಪ್ನಲ್ಲಿ ಈ ರೀತಿ ಅಸಭ್ಯವಾದ ಸಂದೇಶ ಹಾಕಿದ್ದಾನೆ. ಇದರಿಂದ ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕಿಯರಿಗೆ ಇರುಸು ಮುರುಸು ತರಿಸಿದೆ.
ಪ್ರೊಫೆಸರ್ ದೇವರಾಜ ತಳವಾರ ಮೊದಲಿನಿಂದಲೂ ವಿದ್ಯಾರ್ಥಿನಿಯರಿಗೆ ಈ ರೀತಿಯ ಮೆಸೇಜ್ ಕಳಿಸಿ ಸತಾಯಿಸುತ್ತಿದ್ದನು. ಎನ್ಎಸ್ಎಸ್ ಕ್ಯಾಂಪ್ ನ ಕೋ ಆರ್ಡಿನೇಟರ್ ಆಗಿರುವ ಈತ ಶಿಬಿರಗಳಲ್ಲೂ ಕೂಡ ನಿದ್ದೆ ಬರುತ್ತಿಲ್ವಾ… ಎಂದು ಮಧ್ಯರಾತ್ರಿಯಲ್ಲಿ ವಿದ್ಯಾರ್ಥಿನಿಯರಿಗೆ ಮೆಸೇಜ್ ಕಳಿಸುತ್ತಿದ್ದ ಎಂಬ ಆರೋಪವು ಈತನ ಮೇಲಿದೆ.
ಪ್ರೊಫೆಸರ್ ನ ಸಂದೇಶಗಳ ಪುರಾಣ ಇದೇ ಮೊದಲೇನಲ್ಲ. ಈ ಹಿಂದೆಯೂ ಇದೇ ರೀತಿ ಸಂದೇಶ ಕಳಹಿಸಿದ್ದು, ಇದರಿಂದ ವಿದ್ಯಾರ್ಥಿನಿಯರು ತಮ್ಮ ಮುಂದೆ ಅಳಲು ತೋಡಿಕೊಂಡಿದ್ದರು ಎಂದು ಕಾಲೇಜಿನ ಪ್ರಾಂಶುಪಾಲರು ಹೇಳಿದ್ದಾರೆ. ಆದರೆ ಇದು ನನಗೆ ಗೊತ್ತಿಲ್ಲದೇ ತಪ್ಪಾಗಿದೆ ಎಂದು ಬೆಪ್ಪನಂತೆ ಉಪನ್ಯಾಸಕನಾದ ದೇವರಾಜ ತಳವಾರ ಹೇಳುತ್ತಿದ್ದಾನೆ.