ಮಂಡ್ಯ: ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಪ್ರೊ.ಕೆ.ಎಸ್ ಭಗವಾನ್ ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಟಿಪ್ಪು ಓರ್ವ ಜಾತ್ಯಾತೀತ ರಾಜ. ಟಿಪ್ಪು ಜಯಂತಿಗೆ ವಿರೋಧ ಮಾಡುವುದು ಸರಿಯಲ್ಲ. ತನ್ನ ಆಳ್ವಿಕೆಯಲ್ಲಿ ಎಲ್ಲಾ ಸಮುದಾಯವನ್ನು ಟಿಪ್ಪು ಸಮನಾಗಿ ಕಂಡಿದ್ದಾನೆ. ಆತ ಯಾವ ಸಮುದಾಯಕ್ಕೂ ತೊಂದರೆ ಕೊಟ್ಟವನಲ್ಲ. ಆದರೆ ರಾಜಕೀಯಕ್ಕಾಗಿ ಟಿಪ್ಪು ಜಯಂತಿಯನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಭಗವಾನ್ ತಮ್ಮ ಅಸಮಧಾನವನ್ನು ಹೊರಹಾಕಿದ್ದಾರೆ.
ಟಿಪ್ಪು ಸುಲ್ತಾನ್ ಸಾಧನೆ ಅಪಾರ, ಆತ ಮೈಸೂರು ರಾಜರಿಗಿಂತ ಮೊದಲೇ ಕೆ.ಆರ್.ಎಸ್ ಅಣೆಕಟ್ಟೆ ಕಟ್ಟಲು ಚಿಂತಿಸಿದ್ದ. ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಸಾಯದಿದ್ದರೆ ಅಂದೇ ಅಣೆಕಟ್ಟೆ ನಿರ್ಮಾಣವಾಗ್ತಿತ್ತು. ಆಗ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ನೀರಿನ ಸಮಸ್ಯೆಯೇ ಇರುತ್ತಿರಲಿಲ್ಲ. ಯಾಕೆಂದರೆ ಟಿಪ್ಪು ಸುಲ್ತಾನ್ ಆಳ್ವಿಕೆ ಸಮಯದಲ್ಲಿ ಆತನ ಕೈಕೆಳಗೆ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಿತ್ತು ಎಂದು ತಿಳಿಸಿದರು.
ನಾನು ಬಾಲಗಂಗಾಧರ ನಾಥ ಸ್ವಾಮೀಜಿ ಬಗ್ಗೆ ಅಪಾರ ಅಭಿಮಾನ ಹೊಂದಿದ್ದೇನೆ. ಅದಕ್ಕಾಗಿಯೇ ಈಗಲೂ ಮಠದವರ ಜೊತೆ ಉತ್ತಮ ಒಡನಾಟ ಇದೆ, ಹಾಗಾಗಿ ಎಡಪಂಥೀಯ ವಿಚಾರವಾದಿಯಾಗಿದ್ದರೂ ಮಠಕ್ಕೆ ಬಂದಿದ್ದೇನೆ. ಆದರೆ ದೇವಾಲಯಕ್ಕೆ ನಾನು ಭೇಟಿ ನೀಡುವುದಿಲ್ಲ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv