ಮುನಿರತ್ನ ನಿರ್ಮಾಣದಲ್ಲಿ ಮೂಡಿ ಬಂದಿರೋ ಕುರುಕ್ಷೇತ್ರ ಬಿಡುಗಡೆಯ ಕ್ಷಣಗಳು ಸನ್ನಿಹಿತವಾಗುತ್ತಿವೆ. ಕೇವಲ ಪ್ರೇಕ್ಷಕರು ಮಾತ್ರವಲ್ಲದೇ ಸಿನಿಮಾ ತಾರೆಗಳಿಗೂ ಕೂಡಾ ಈ ಚಿತ್ರ ಹೇಗೆ ಮೂಡಿ ಬಂದಿರಬಹುದೆಂಬ ಕುತೂಹಲವಿದೆ. ಈಗಾಗಲೇ ಇದರ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಸೋಮವಾರ ರಾತ್ರಿ ನಡೆದ ಈ ವಿಶೇಷ ಪ್ರದರ್ಶನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿಖಿಲ್, ಮುನಿರತ್ನ ಅವರೂ ಸೇರಿ ಒಂದಷ್ಟು ಜನ ಕುರುಕ್ಷೇತ್ರವನ್ನು ಕಣ್ತುಂಬಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಕೌರವೇಶ್ವರನಾಗಿ ಅಬ್ಬರಿಸಿರುವವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಇನ್ನು ಅಭಿಮನ್ಯುವಾಗಿ ನಟಿಸಿರುವವರು ನಿಖಿಲ್ ಕುಮಾರಸ್ವಾಮಿ. ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿರೋ ಮುನಿರತ್ನ ಸೇರಿದಂತೆ ಒಂದಷ್ಟು ಮಂದಿ ಕುರುಕ್ಷೇತ್ರವನ್ನು ನೋಡಿದ್ದಾರೆ. ಇದಾದ ಮೇಲೆ ಮುನಿರತ್ನ ಮತ್ತು ನಿಖಿಲ್ ಒಟ್ಟಾಗಿಯೇ ಹೊರ ಬಂದು ಮಾಧ್ಯಮಗಳ ಮುಂದೆ ಮಾತಾಡಿದ್ದಾರೆ. ಮುನಿರತ್ನ ಒಟ್ಟಾರೆ ಸಿನಿಮಾ ಮೂಡಿ ಬಂದಿರೋ ರೀತಿ, ಕಲಾವಿದರ ಅಭಿನಯವನ್ನೆಲ್ಲ ಮೆಚ್ಚಿ ಕೊಂಡಾಡಿದ್ದಾರೆ.
ಮುನಿರತ್ನ ಅವರ ಕನಸಿನ ಕೂಸಿನಂಥಾ ಚಿತ್ರ ಕುರುಕ್ಷೇತ್ರ. ಇದನ್ನು ಅವರು ಕೋಟಿ ಕೋಟಿ ಸುರಿದು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಕನ್ನಡದೊಂದಿಗೇ ಹಲವಾರು ಭಾಷೆಗಳಲ್ಲಿಯೂ ಬಿಡುಗಡೆ ಮಾಡುತ್ತಿದ್ದಾರೆ. ಇದುವರೆಗೂ ಅದೆಷ್ಟೋ ಸಲ ಈ ಸಿನಿಮಾವನ್ನು ಬಿಡಿ ಬಿಡಿಯಾಗಿ ಅವರು ನೋಡಿರಬಹುದು. ಆದರೆ ಈಗ ಸನ್ನದ್ಧವಾಗಿರೋ ಈ ಚಿತ್ರವನ್ನು ರಿಲ್ಯಾಕ್ಸ್ ಮೂಡಿನಲ್ಲಿ, ಪ್ರೇಕ್ಷಕನ ಸ್ಥಾನದಲ್ಲಿ ಕೂತು ನೋಡೋದು ಬೇರೆಯದ್ದೇ ಅನುಭವ ಕೊಡುತ್ತದೆ. ಅಂಥಾದ್ದೊಂದು ಅನುಭವ ತನ್ನದಾಗಿಸಿಕೊಂಡಿರೋ ಮುನಿರತ್ನರಿಗೆ ಒಟ್ಟಾರೆ ಚಿತ್ರ ಮೂಡಿ ಬಂದಿರೋ ರೀತಿಯ ಬಗ್ಗೆ ತೃಪ್ತಿ ಇದ್ದಂತಿದೆ.
ಇನ್ನು ಇಂಥಾ ಪೌರಾಣಿಕ ಚಿತ್ರಗಳಲ್ಲಿ ಯಾವ ಪಾತ್ರಗಳನ್ನು ನಿರ್ವಹಿಸಲೂ ತುಂಬಾ ಶ್ರಮ ಹಾಕಬೇಕಾಗುತ್ತದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಅನೇಕರು ಶ್ರಮವಹಿಸಿ ಅದನ್ನು ನಿರ್ವಹಿಸಿದ್ದಾರೆ. ಆ ಸಾಲಿನಲ್ಲಿ ನಿಖಿಲ್ ಕೂಡಾ ಸೇರಿಕೊಂಡಿದ್ದಾರೆ. ಅವರೀಗ ಬಿಡುಗಡೆಗೆ ಒಂದಷ್ಟು ದಿನ ಮುಂಚೆಯೇ ನಿರ್ಮಾಪಕರೊಂದಿಗೆ ಕೂತು ಕುರುಕ್ಷೇತ್ರವನ್ನು ನೋಡಿದ್ದಾರೆ.