ಬೆಂಗಳೂರು: ಸಿನಿಮಾ ನಿರ್ಮಾಣ ಮಾಡಿಕೊಡುವುದಾಗಿ ಹೇಳಿ ನಿರ್ಮಾಪಕರಿಂದ ಹಣ ಪಡೆದು, ಚಿತ್ರವನ್ನು ಮಾಡದೇ ಹಣವನ್ನು ಹಿಂದಿರುಗಿಸದೇ ನಿರ್ದೇಶಕ ಪ್ರೇಮ್ ಸತಾಯಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಕನಕಪುರ ಶ್ರೀನಿವಾಸ್ ಅವರು ಹಣವನ್ನು ವಾಪಸ್ ನೀಡುವಂತೆ ನಿರ್ದೇಶಕ ಪ್ರೇಮ್ ಅವರ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಹಣವನ್ನು ಮರಳಿ ನೀಡುವವರೆಗೂ ಜಾಗ ಬಿಟ್ಟು ಕದಲುವುದಿಲ್ಲವೆಂದು ಪಟ್ಟುಹಿಡಿದು ಕುಳಿತಿದ್ದಾರೆ.
ಏನಿದು ಆರೋಪ?
ಹ್ಯಾಟ್ರಿಕ್ ಹಿರೋ ಶಿವರಾಜ್ಕುಮಾರ್ ಅಭಿನಯದ ಬಿಗ್ ಹಿಟ್ ಜೋಗಿ ಚಲನಚಿತ್ರ ನಿರ್ಮಾಣದ ಬಳಿಕ ನಿರ್ದೇಶಕ ಪ್ರೇಮ್ ಅವರಿಗೆ ಸಿನಿಮಾ ಮಾಡಿಕೊಂಡುವಂತೆ ಶ್ರೀನಿವಾಸ್ 10 ಲಕ್ಷ ರೂಪಾಯಿ ಮುಂಗಡ ಹಣವನ್ನು ಕೊಟ್ಟಿದ್ದರು. ಆದರೆ ಹಣ ಪಡೆದ ಬಳಿಕ ಪ್ರೇಮ್ ಇಲ್ಲಿಯವರೆಗೂ ಯಾವುದೇ ಸಿನೆಮಾವನ್ನು ಮಾಡಿಕೊಟ್ಟಿಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ಶ್ರೀನಿವಾಸ್, ಪ್ರೇಮ್ ನನ್ನ ಬಳಿ ಸಿನಿಮಾ ಮಾಡೋದಾಗಿ ಹೇಳಿ 10 ಲಕ್ಷ ರೂಪಾಯಿ ತೆಗೆದುಕೊಂಡಿದ್ದರು. ಆದರೆ ಇದೂವರೆಗೂ ಸಿನೆಮಾ ಮಾಡಿಕೊಟ್ಟಿಲ್ಲ. ಅಲ್ಲದೇ ಇಲ್ಲಿಯ ತನಕ 5 ಲಕ್ಷ ರೂಪಾಯಿ ಮಾತ್ರ ಕೊಟ್ಟಿದ್ದಾರೆ. ಆದರೆ ಉಳಿದ ಹಣವನ್ನು ನೀಡಲು ಸತಾಯಿಸುತ್ತಿದ್ದಾರೆ. ನಮ್ಮಂತಹ ಸಣ್ಣ ನಿರ್ಮಾಪಕರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ಬೆಳಗ್ಗೆಯಿಂದಲೂ ನಾನು ಊಟ-ತಿಂಡಿ ಮಾಡದೇ ಕಾಯುತ್ತಿದ್ದೇನೆ. ನನ್ನ ಡ್ರೈವರ್ ರನ್ನು ಕಳುಹಿಸಿದರೆ ಧಮ್ಕಿ ಹಾಕಿ ಕಳುಹಿಸಿದ್ದಾರೆ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಒಂದೂವರೆ ವರ್ಷದ ಹಿಂದೆ ನಾನು ಈ ವಿಚಾರದ ಬಗ್ಗೆ ಚಲನಚಿತ್ರ ಮಂಡಳಿಗೂ ದೂರನ್ನು ನೀಡಿದ್ದೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ದುಡ್ಡು ಕೊಡುವ ತನಕ ನಾನು ಇಲ್ಲಿಂದ ಕದಲುವುದಿಲ್ಲ. ನನ್ನ ಮನೆಯವರು ಸಹ ಇಲ್ಲಿಗೆ ಬರುತ್ತಿದ್ದಾರೆ. ಎಲ್ಲರೂ ಸೇರಿ ಪ್ರೇಮ್ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ. ನಾವು ಬಿಕಾರಿಯಾಗಿ ಆಟೋದಲ್ಲಿ ಓಡಾಡುತ್ತಿದ್ದೇನೆ. ಪ್ರೇಮ್ ಮಾತ್ರ ಕೋಟಿ ಬೆಲೆಯ ಕಾರಿನಲ್ಲಿ ಓಡಾಡುತ್ತಿದ್ದಾರೆಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv