ಬಳ್ಳಾರಿ: ರಾಜ್ಯದಲ್ಲಿ ಮತ್ತೆ ವಿದ್ಯುತ್ ಸಮಸ್ಯೆ ತಲೆದೋರುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಬಳ್ಳಾರಿಯ ಬಿಟಿಪಿಎಸ್ ವಿದ್ಯುತ್ ಶಾಖೋತ್ಪನ ಕೇಂದ್ರಕ್ಕೆ ಕಲ್ಲಿದ್ದಲು ಸಮಸ್ಯೆ ಎದುರಾಗಿದ್ದು, ಕಲ್ಲಿದ್ದಲು ಇಲ್ಲದೇ ವಿದ್ಯುತ್ ಉತ್ಪಾದನೆ ಕುಸಿತ ಕಂಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಆಗುವ ಸೂಚನೆ ಕಂಡುಬಂದಿದೆ.
ಬರ, ಕಲ್ಲಿದ್ದಲು ಸಮಸ್ಯೆ ಇದ್ದರೂ ವಿದ್ಯುತ್ ನಲ್ಲಿ ವ್ಯತ್ಯಯ ಆಗಲ್ಲ ಅಂತ ಪವರ್ ಮಿನಿಸ್ಟರ್ ಡಿಕೆ ಶಿವಕುಮಾರ್ ಈ ಹಿಂದೆ ಹೇಳಿದ್ದರು. ಆದರೆ ರಾಜ್ಯದಲ್ಲಿ ಮತ್ತೆ ವಿದ್ಯುತ್ ಸಮಸ್ಯೆ ಶುರುವಾದಂತೆ ಕಾಣುತ್ತಿದೆ. ಬಿಟಿಪಿಎಸ್ಗೆ ದಿನನಿತ್ಯ 17 ಸಾವಿರ ಟನ್ ಕಲ್ಲಿದ್ದಲಿನ ಅವಶ್ಯಕತೆಯಿದೆ. ಆದ್ರೆ ಕೇವಲ 9 ಸಾವಿರ ಟನ್ ಮಾತ್ರ ಕಲ್ಲಿದ್ದಲು ಸಂಗ್ರಹವಿರುವುದರಿಂದ ವಿದ್ಯುತ್ ಉತ್ಪಾದನೆ ಕುಸಿದಿದೆ.
500 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ 5 ಸಾವಿರ ಟನ್ ಕಲ್ಲಿದ್ದಲು ಬೇಕು. 1700 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ನಿತ್ಯ 17 ಸಾವಿರ ಟನ್ ಕಲ್ಲಿದ್ದಲು ಅವಶ್ಯಕತೆಯಿದೆ. ಆದ್ರೆ ಬಿಟಿಪಿಎಸ್ಗೆ ಸಿಂಗರೇಣಿ ಕೋಲ್ ನಿಂದ ಸರಬರಾಜು ಆಗ್ತಿದ್ದ ಕಲ್ಲಿದ್ದಲು ಪೂರೈಕೆ ಇದೀಗ ಸ್ಥಗಿತಗೊಂಡ ಪರಿಣಾಮ ವಿದ್ಯುತ್ ಉತ್ಪಾದನೆಗೆ ತೊಂದರೆಯಾಗಿದೆ. ಕಲ್ಲಿದ್ದಲು ಇಲ್ಲದ ಪರಿಣಾಮ ಮುಂದಿನ ದಿನಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆ ಆಗುವ ಸಾಧ್ಯತೆಯಿದೆ.
ಬಿಟಿಪಿಎಸ್ ಗೆ ಇನ್ನೆರೆಡು ದಿನಗಳಲ್ಲಿ ಕಲ್ಲಿದ್ದಲು ಪೂರೈಕೆ ಆಗಬೇಕು. ಇಲ್ಲದಿದ್ರೆ ಸಂಪೂರ್ಣವಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.