ಚಿತ್ರದುರ್ಗ: ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ವೀಕೆಂಡ್ ಕರ್ಫ್ಯೂನಿಂದಾಗಿ ಜನರು ತೀವ್ರ ಸಮಸ್ಯೆ ಅನುಭವಿಸುವಂತಾಗಿದೆ. ಪ್ರತಿದಿನ ಜನ ಜಂಗುಳಿಯಿಂದ ತುಂಬಿರುತ್ತಿದ್ದ ಚಿತ್ರದುರ್ಗ ಬಸ್ ನಿಲ್ದಾಣ ಸಂಪೂರ್ಣ ಖಾಲಿಯಾಗಿದ್ದು, ಅಂತ್ಯ ಸಂಸ್ಕಾರಕ್ಕೆ ತೆರಳುತ್ತಿದ್ದ ದಾವಣಗೆರೆ ಜಿಲ್ಲೆ ಹರಪನಹಳ್ಳಿ ಮೂಲದ ಮಹಿಳೆ ಕಣ್ಣೀರಿಟ್ಟಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ
ಇಂದು ಬೆಳಗಿನ ಜಾವದಿಂದಲೇ ಬಸ್ ನಿಲ್ದಾಣಕ್ಕೆ ಬೆರಳೆಣಿಕೆಯಷ್ಟು ಪ್ರಯಾಣಿಕರು ಮಾತ್ರ ಬಸ್ ನಿಲ್ದಾಣಕ್ಕೆ ಧಾವಿಸಿದ್ದರು. ಆದರೆ ಸೀಟುಗಳು ಭರ್ತಿಯಾಗದ ಹಿನ್ನೆಲೆಯಲ್ಲಿ ಬಸ್ ಗಳಲ್ಲಿ ಹೊರಡುವುದು ವಿಳಂಬವಾಗಿದ್ದು, ಪ್ರಯಾಣ ಮಾಡುವ ಪ್ರಯಾಣಿಕರಿಲ್ಲದೇ ಬಸ್ ಗಳ ಸೀಟುಗಳು ಸಹ ಖಾಲಿ-ಖಾಲಿಯಾಗಿದ್ದವು. ಇದನ್ನೂ ಓದಿ: ಕರ್ಫ್ಯೂ ವೇಳೆ ಕ್ರಿಕೆಟ್ ಆಡಬಹುದೇ – ಯುವಕನ ಪ್ರಶ್ನೆಗೆ ಪೊಲೀಸರ ‘ಸಿಲ್ಲಿ ಪಾಯಿಂಟ್’ ಉತ್ತರ
ಈ ನಡುವೆ ದಾವಣಗೆರೆಯ ಹರಪನಹಳ್ಳಿಯಿಂದ ಬಂದಿದ್ದ ಮಹಿಳೆಯೊಬ್ಬರು ಬೆಂಗಳೂರಿನಲ್ಲಿ ಅವರ ಸಂಬಂಧಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಬಸ್ನಲ್ಲಿ ಕುಳಿತ್ತಿದ್ದಾರೆ. ಆದರೆ ಬಸ್ ಹೊರಡುವುದು ವಿಳಂಬವಾದ ಹಿನ್ನೆಲೆ ಪರದಾಡುತ್ತಾ ಕಣ್ಣೀರಿಟ್ಟಿದ್ದಾರೆ. ಆಗ ಅವರ ಸಮಸ್ಯೆ ಅರಿತ ಬಸ್ ಚಾಲಕರು ತಕ್ಷಣ ಅಲ್ಲಿಂದ ಹೊರಟಿದ್ದು, ಆದಷ್ಟು ಬೇಗ ಬೆಂಗಳೂರಿಗೆ ತಲುಪಿಸುವುದಾಗಿ ಭರವಸೆ ನೀಡಿದರು.
ಕರ್ಫ್ಯೂ ಪರಿಣಾಮ ಪ್ರಯಾಣಿಕರ ಆಗಮನಕ್ಕಾಗಿ ಬಸ್ ಚಾಲಕ, ನಿರ್ವಾಹಕರು ಸಹ ಕಾಯುವಂತಾಗಿತ್ತು. ಪ್ರತಿದಿನ ಚಿತ್ರದುರ್ಗದಿಂದ ಬೆಂಗಳೂರಿಗೆ ಐದು ನಿಮಿಷಕ್ಕೊಂದು ಬಸ್ ಹೊರಡುತ್ತಿತ್ತು. ಆದ್ರೆ ವೀಕೆಂಡ್ ಕರ್ಫ್ಯೂನಿಂದಾಗಿ ಇಂದು ಬೆಳಗ್ಗೆ ಐದು ಗಂಟೆಯಿಂದ ಬಸ್ ನಿಲ್ದಾಣದಲ್ಲಿ ಕಾದರೂ ಬಸ್ ಹೊರಡ್ತಿಲ್ಲ ಎಂದು ಪ್ರಯಾಣಿಕರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇದನ್ನೂ ಓದಿ: ಇಂದು 8,906 ಪಾಸಿಟಿವ್ 4 ಸಾವು – ಬೆಂಗಳೂರಿನಲ್ಲಿ 7,113 ಮಂದಿಗೆ ಸೋಂಕು