ಬೆಂಗಳೂರು: ಪಂಚಾಭಾಷಾ ತಾರೆಯಾಗಿ ಮಿನುಗುತ್ತಿರುವ ಪ್ರಿಯಾಮಣಿಯವರು ರಸ್ತೆಬದಿಯಲ್ಲಿ ನಿಂತು ಸ್ಟಿಕ್ಕರ್, ಹೇರ್ ಬ್ಯಾಂಡ್ ಹಾಗೂ ಕ್ಲಿಪ್ಗಳನ್ನು ಮಾರಾಟ ಮಾಡುತ್ತಿರುವುದು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಅಭಿಮಾನಿಗಳಲ್ಲಿ ಈ ಕುರಿತು ಯಾವ ಸಿನಿಮಾದ ಚಿತ್ರೀಕರಣ ಎಂಬ ಗೊಂದಲ ಮೂಡಬಹುದು. ಆದರೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ಇದೀಗ ಪ್ರಿಯಾಮಣಿ ಅವರ ಸರದಿ ಬಂದಿದೆ. ಈ ಹಿಂದೆ ಸ್ಯಾಂಡಲ್ ವುಡ್ ನಟರು ಮಾರಾಟ ಮಾಡಿ ಸಹಾಯ ಮಾಡಿದರು. ಈ ಬಾರಿ ಪ್ರಿಯಾಮಣಿಯವರು ಒಂದು ಕುಟುಂಬಕ್ಕೆ ಸಹಾಯಹಸ್ತ ಚಾಚಿದ್ದಾರೆ.
ಮಂಜುಳಾ-ಸಿದ್ದರಾಜು ಕುಟುಂಬಕ್ಕಾಗಿ ಪ್ರಿಯಾಮಣಿ ಖಾಸಗಿ ವಾಹಿನಿಯ ಕಾರ್ಯಕ್ರಮದ ಮೂಲಕ ಸಹಾಯಕ್ಕೆ ಮುಂದಾಗಿದ್ದು, ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದ ರಸ್ತೆ ಬದಿಯಲ್ಲಿ ಅಲಂಕಾರಿಕ ವಸ್ತುಗಳಾದ ಬಳೆ, ಕ್ಲಿಪ್, ಸ್ಟಿಕ್ಕರ್, ಹೇರ್ ಬ್ಯಾಂಡ್ ಅನ್ನು ಮಾರಾಟ ಮಾಡಿದರು. ಅಷ್ಟೇ ಅಲ್ಲದೇ ದೇವಸ್ಥಾನದ ಸುತ್ತ ಅಭಿಮಾನಿಗಳು ತುಂಬಿಕೊಂಡಿದ್ದು, ಅವರೊಂದಿಗೆ ಕುಣಿದು ಕುಪ್ಪಳಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡರು.
ಮಂಜುಳಾ ಅವರಿಗೆ ಕಿಡ್ನಿ ಸಮಸ್ಯೆ ಇದ್ದು, ಮಗನು ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದಾರೆ. ಪತಿ ಸಿದ್ದರಾಜು ಅವರು ಧೋಬಿ ಕೆಲಸ ನಿರ್ವಹಿಸುತ್ತಿದ್ದು, ದುಡಿದ ಹಣದಿಂದ ಸಂಸಾರವನ್ನು ಸಾಗಿಸಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲದೇ ಮಗ ಮತ್ತು ಮಂಜುಳಾ ಅವರ ಚಿಕಿತ್ಸೆಗೆ ಈಗಾಗಲೇ ಸಾಲವನ್ನು ಮಾಡಿಕೊಂಡಿದ್ದಾರೆ. ಹೀಗಾಗಿ ಪ್ರಿಯಾಮಣಿ ಈ ಕುಟುಂಬಕ್ಕೆ ಸಹಾಯ ಮಾಡುವ ಮನಸ್ಸು ಮಾಡಿದ್ದಾರೆ.
ಈ ಹಿಂದೆ ಸ್ಟಾರ್ ನಟ, ನಟಿಯರಾದ ಶ್ರೀಮುರುಳಿ, ಉಪೇಂದ್ರ, ರಶ್ಮಿಕಾ ಮಂದಣ್ಣ, ಸೃಜನ್ ಲೋಕೇಶ್ ಹಾಗೂ ಪ್ರಿಯಾಂಕ ಉಪೇಂದ್ರ ಇದೇ ರೀತಿ ಕೆಲಸ ಮಾಡಿ ಈ ಕಾರ್ಯಕ್ರಮದ ಮೂಲಕ ನಿಮ್ಮೊಂದಿಗೆ ಇದ್ದೇವೆ ಎಂದು ಭರವಸೆ ನೀಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv