ಬೆಂಗಳೂರು: ಈಗಾಗಲೇ ನಾಡಿನೆಲ್ಲೆಡೆ ದಸರಾ ದರ್ಬಾರ್ ಜೋರಾಗಿದೆ. ಸೋಮವಾರ ಆಯುಧ ಪೂಜೆ, ನಾಡಿದ್ದು ವಿಜಯದಶಮಿ ಇದೆ. ಒಟ್ಟು ಮೂರು ದಿನ ಸಾಲು-ಸಾಲು ರಜೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಹೊರ ರಾಜ್ಯದಿಂದ ಬಂದು ಬೆಂಗಳೂರಿನಲ್ಲಿ ವಾಸವಾಗಿರುವ ಜನರು ತಮ್ಮ ತಮ್ಮ ಊರುಗಳತ್ತ ಹೊರಡಲು ರೆಡಿಯಾಗಿದ್ದಾರೆ. ಇದನ್ನೇ ಬಂಡವಾಳವಾಗಿಸಿಕೊಂಡ ಖಾಸಗಿ ಬಸ್ಗಳು ಹಗಲು ದರೋಡೆಗಿಳಿದಿವೆ.
ಕೆಲವರು ರಜೆ ಇರುವುದರಿಂದ ಫ್ಯಾಮಿಲಿ ಸಮೇತ ಬೇರೆ ಬೇರೆ ಸ್ಥಳಗಳಿಗೆ ಪ್ರವಾಸ ಹೋಗಲು ಸಿದ್ಧರಾಗಿದ್ದಾರೆ. ಆದರೆ ಖಾಸಗಿ ಬಸ್ಗಳ ಟಿಕೆಟ್ ರೇಟ್ ದುಪ್ಪಟ್ಟಾಗಿರುವುದರಿಂದ ಪ್ರಯಾಣಿಕರು ಕಂಗಾಲಾಗಿದ್ದಾರೆ. ಇಷ್ಟು ದಿನ ಖಾಸಗಿ ಬಸ್ಗಳ ಟಿಕೆಟ್ ರೇಟ್ ಸಾಮಾನ್ಯವಾಗಿತ್ತು. ಆದರೆ ಶನಿವಾರ ರಾತ್ರಿಯಿಂದ ಬಸ್ಗಳ ಟಿಕೆಟ್ ರೇಟ್ ದುಬಾರಿಯಾಗಿದೆ.
ಬಸ್ಗಳು ರೇಟ್: ಬೆಂಗಳೂರಿನಿಂದ ಮಂಗಳೂರಿಗೆ 600 ರೂ. ಇದ್ದ ಬಸ್ ದರ ಈಗ 1400 – 1500 ರೂ. ಆಗಿದೆ. ಉಡುಪಿಗೆ 700 ರೂ. ಇತ್ತು. ರಾತ್ರಿಯಿಂದ 1300-1700ರೂ. ಅಧಿಕವಾಗಿದೆ. ಇನ್ನೂ ಬೆಂಗಳೂರಿನಿಂದ ಶಿವಮೊಗ್ಗಗೆ 500 ರೂ. ಬಸ್ ರೇಟ್ ಇತ್ತು. ಇಂದಿನಿಂದ 1000-1600ರೂ. ಹೆಚ್ಚಾಗಿದೆ. ಬೀದರ್ ಗೆ 850 ರೂ.ಯಿಂದ 2000-2200ರೂ. ಆಗಿದೆ. ಬೆಳಗಾಂಗೆ 700 ರೂ. ಬಸ್ ರೇಟ್ ಇತ್ತು. ಈಗ 1000-1200ರೂ. ಆಗಿದೆ. ಬೆಂಗಳೂರು ಟು ಹೈದರಾಬಾದಿಗೆ 1400 ರೂ. ಇತ್ತು. ಇಂದು 1700 ರೂ. ಆಗಿದೆ.
ಇನ್ನೂ ಮನೆಯವರೊಂದಿಗೆ ಹಬ್ಬ ಆಚರಿಸಬೇಕು ಅನ್ನೋದು ಪ್ರತಿ ಪ್ರಯಾಣಿಕರ ಆಸೆಯಾಗಿರುತ್ತದೆ. ಆದರೆ ಇದೆ ಅನಿವಾರ್ಯತೆಯನ್ನ ಖಾಸಗಿಯವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಖಾಸಗಿಯವರ ಈ ಹಗಲು ದರೋಡೆಗೆ ಸರ್ಕಾರ, ಸಾರಿಗೆಯವರು ಬ್ರೇಕ್ ಹಾಕಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.