ಮಡಿಕೇರಿ: ವಿರಾಜಪೇಟೆ ತಾಲೂಕಿನ ನಾಗರಹೊಳೆ ಅಭಯಾರಣ್ಯದ ಮತ್ತಿಗೋಡು ಆನೆ ಶಿಬಿರದ ರಸ್ತೆಯಲ್ಲಿ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ದಸರಾಗೆ ತೆರಳಬೇಕಿದ್ದ ಸಾಕಾನೆಯೊಂದು ಸೊಂಟ ಮುರಿದಿದೆ.
ಮತ್ತಿಗೋಡು ಆನೆ ಶಿಬಿರದ 45 ವರ್ಷ ವಯಸ್ಸಿನ ರಂಗ ಎನ್ನುವ ಸಾಕಾನೆಯ ಸೊಂಟ ಮುರಿದಿದೆ. ಮಾವುತರು ಎಂದಿನಂತೆ ಭಾನುವಾರ ರಾತ್ರಿ ರಂಗನನ್ನು ತಿರುಗಾಡಲು ಬಿಟ್ಟಿದ್ದರು. ಈ ವೇಳೆ ಕಣ್ಣೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಆನೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಆನೆ ಸ್ಥಳದಲ್ಲೇ ಕುಸಿದು ಬಿದ್ದು, ಸೊಂಟ ಮುರಿದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಮಾವುತರು ಹಾಗೂ ಪುಶುವೈದ್ಯ ಡಾ.ಮುಜೀಬ್ ಸಹಾಯದಿಂದ ಆನೆಗೆ ಚಿಕಿತ್ಸೆ ನೀಡಿ, ಶಿಬಿರಕ್ಕೆ ಕರೆತರಲಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಬೆಂಗಳೂರಿನ ಹೊರವಲಯದಲ್ಲಿ ರೌಡಿ ರಂಗನೆಂದೇ ಖ್ಯಾತಿ ಪಡೆದಿದ್ದ ಈ ಆನೆಯನ್ನು ಸೆರೆ ಹಿಡಿದು, ಮತ್ತಿಗೋಡು ಆನೆ ಶಿಬಿರದಲ್ಲಿ ಪಳಗಿಸಲಾಗಿತ್ತು.
ದುರಂತವೇನೆಂದರೆ ಇನ್ನೆರಡು ದಿನ ಕಳೆದಿದ್ದರೆ ರಂಗ ದಸರಾದಲ್ಲಿ ಪಾಲ್ಗೊಳ್ಳಲು ತೆರಳಬೇಕಿತ್ತು. ಸದ್ಯ ರಂಗ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಸಂಬಂಧ ಖಾಸಗಿ ಬಸ್ ಚಾಲಕನ ವಿರುದ್ಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv