ಬೆಂಗಳೂರು: ಆಮ್ ಆದ್ಮಿ ಪಾರ್ಟಿಯ ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನಕ್ಕೆ ಪಕ್ಷದ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿ ಬುಧವಾರ ಚಾಲನೆ ನೀಡಿದರು. ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ನಡೆದ ಸಮಾರಂಭದಲ್ಲಿ ವೈದ್ಯ, ವಕೀಲ, ಪತ್ರಕರ್ತ ಹಾಗೂ ಆಟೋ ಚಾಲಕರೊಬ್ಬರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಅಭಿಯಾನವನ್ನು ಆರಂಭಿಸಲಾಯಿತು.
ಉತ್ತರಕರ್ನಾಟಕ ಭಾಗದ ಖ್ಯಾತ ಪತ್ರಕರ್ತ ವೆಂಕಣ್ಣಗೌಡ ಗೋವಿಂದಗೌಡ್ರು, ವೈದ್ಯರಾದ ಡಾ.ದೇವಾಂಗ್ ಗೌತಮ್, ವಕೀಲರುಗಳಾದ ತೇಜಸ್ವಿನಿ, ಡಿ.ಯು.ಸೆಂಥಿಲ್ ಕುಮಾರ್, ನ್ಯಾಯಾಂಗ ವಿದ್ಯಾರ್ಥಿನಿ ವರ್ಷಿಕ ಅವರುಗಳನ್ನು ಅಧಿಕೃತವಾಗಿ ಸದಸ್ಯತ್ವ ನೋಂದಣಿ ಮಾಡಿಸಿಕೊಳ್ಳಲಾಯಿತು. ಇದನ್ನೂ ಓದಿ: ಬಪ್ಪನಾಡಿನಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ – ಸಾಮರಸ್ಯ ಎತ್ತಿಹಿಡಿದ ಕ್ಷೇತ್ರದ ಆಡಳಿತ ಮಂಡಳಿ
ನೋಂದಣೆಯ ನಂತರ ಮಾತನಾಡಿದ ಪೃಥ್ವಿ ರೆಡ್ಡಿ ಅವರು, ದೇಶದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಕ್ಷ ಎಂಬ ಕೀರ್ತಿಗೆ ಆಮ್ ಆದ್ಮಿ ಪಾರ್ಟಿ ಪಾತ್ರವಾಗಿದೆ. ಪಕ್ಷ ಆರಂಭವಾಗಿ ಹತ್ತು ವರ್ಷ ತುಂಬುವ ಮುನ್ನವೇ ಎರಡು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದ್ದೇವೆ. ಕರ್ನಾಟಕದಲ್ಲಿ ಪಕ್ಷಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಈಗಾಗಲೇ ಬೇರೂರಿರುವ ಎಎಪಿಯನ್ನು ಹೆಮ್ಮರವಾಗಿ ಬೆಳೆಸುವ ಉದ್ದೇಶದಿಂದ ಸದಸ್ಯತ್ವ ಅಭಿಯಾನ ಆರಂಭಿಸಲಾಗಿದೆ ಎಂದು ಹೇಳಿದರು.
ಒಂದೇ ತಿಂಗಳಲ್ಲಿ 50 ಲಕ್ಷ ಸದಸ್ಯರನ್ನು ನೋಂದಣಿ ಮಾಡುವ ಗುರಿ ಇಟ್ಟುಕೊಂಡಿದ್ದೇವೆ. ಜನಪರ ಹೋರಾಟಗಳು, ಮನೆಮನೆ ಭೇಟಿ ಕಾರ್ಯಕ್ರಮಗಳ ಜೊತೆಗೆ ತಂತ್ರಜ್ಞಾನದ ನೆರವಿನಿಂದಲೂ ಜನರ ಜೊತೆ ಸಂಪರ್ಕ ಇಟ್ಟುಕೊಳ್ಳುತ್ತೇವೆ. ದೆಹಲಿ ಸಿಎಂ ಕೇಜ್ರಿವಾಲ್ ಅವರ ಸರ್ಕಾರ ಸಾಧನೆಗಳು ಹಾಗೂ ಆಮ್ ಆದ್ಮಿ ಪಾರ್ಟಿಯ ತತ್ತ್ವ ಸಿದ್ಧಾಂತಗಳಿಗೆ ಜನರು ಆಕರ್ಷಿತರಾಗುತ್ತಿದ್ದಾರೆ. ಸದಸ್ಯತ್ವ ಅಭಿಯಾನದಿಂದ ರಾಜ್ಯದಲ್ಲಿನ ಪಕ್ಷ ಸಂಘಟನೆಗೆ ಆನೆಬಲ ಬರಲಿದೆ ಎಂದು ಭರವಸೆ ಕೊಟ್ಟರು.
ಕೇಜ್ರಿವಾಲ್ ಅವರು ಪಾರದರ್ಶಕ ಆಡಳಿತ ನೀಡಿ, ಜನಪರ ಯೋಜನೆಗಳನ್ನು ಜಾರಿಗೆ ತಂದಾಗಲೇ ಕನ್ನಡಿಗರ ಮನಸ್ಸಿನಲ್ಲಿ ಆಮ್ ಆದ್ಮಿ ಪಾರ್ಟಿಯ ಪರವಾಗಿ ಒಲವು ಉಂಟಾಗಿತ್ತು. ಈಗ ಪಂಜಾಬ್ನಲ್ಲೂ ಪಕ್ಷವು ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವುದು ಕನ್ನಡಿಗರಿಗೆ ಎಎಪಿ ಮೇಲಿದ್ದ ಅಭಿಮಾನವನ್ನು ದುಪ್ಪಟ್ಟು ಹೆಚ್ಚಿಸಿದೆ. ಇವೆಲ್ಲವನ್ನು ಗಮನಿಸಿದರೆ, ಸದಸ್ಯತ್ವ ಅಭಿಯಾನವು ನಿರೀಕ್ಷೆಗೂ ಮೀರಿದ ಯಶಸ್ಸು ಕಾಣುವುದು ಸ್ಪಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಬಪ್ಪನಾಡು ದೇವಸ್ಥಾನ ಹಾಗೂ ಮಾರಿಕಾಂಬಾ ದೇವಸ್ಥಾನ ಕಟ್ಟಿದವರು ಮುಸ್ಲಿಮರು: ರಿಜ್ವಾನ್
ಸಮಾರಂಭದಲ್ಲಿ ಎಎಪಿ ಮುಖಂಡರಾದ ಮೋಹನ್ ದಾಸರಿ, ನಂಜಪ್ಪ ಕಾಳೇಗೌಡ, ಜಗದೀಶ್.ವಿ.ಸದಂ, ಚನ್ನಪ್ಪಗೌಡ ನೆಲ್ಲೂರು, ಮಂಜುನಾಥ್ ಸ್ವಾಮಿ, ಕುಶಲ್ ಸ್ವಾಮಿ, ಉಷಾ ಮೋಹನ್, ವೀಣಾ ರಾವ್, ವಿಜಯ್ ಶಾಸ್ತ್ರಿಮಠ್, ಅಶೋಕ್ ಮೃತ್ಯುಂಜಯ ಮತ್ತಿತರು ಉಪಸ್ಥಿತರಿದ್ದರು.