ರಾಯಚೂರು: ದೇಶವನ್ನ ಬಯಲು ಶೌಚ ಮುಕ್ತ ಮಾಡಲು ಸರ್ಕಾರ, ಜನ ಜಾಗೃತಿ ಜೊತೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡ್ತಿದೆ. ಆದ್ರೆ, ಎಷ್ಟು ಗ್ರಾಮಗಳು ಶೌಚಾಲಯಗಳನ್ನು ಹೊಂದಿವೆ ಅನ್ನೋದೇ ಪ್ರಶ್ನೆ. ಇದನ್ನ ಮಗನಂಡ ರಾಯಚೂರು ಜಿಲ್ಲೆಯ ಸಿಂಧನೂರಿನ ಪ್ರಾಂಶುಪಾಲರಾದ ಸತ್ಯನಾರಾಯಣ ಶೆಟ್ಟಿ, ಸ್ನೇಹಿತರು, ವಿದ್ಯಾರ್ಥಿಗಳನ್ನ ಕಟ್ಟಿಕೊಂಡು ಹಳ್ಳಿಗಳಲ್ಲಿ ಶೌಚಾಲಯ ಕಟ್ಟಿಸ್ತಿದ್ದಾರೆ.
ರಾಯಚೂರು ಜಿಲ್ಲೆ ಸಿಂಧನೂರಿನ ಆಕ್ಸಫರ್ಡ್ ಕಾಲೇಜಿನ ಸಂಸ್ಥಾಪಕ ಪ್ರಾಂಶುಪಾಲರಾಗಿರೋ ಸತ್ಯನಾರಾಯಣ ಶೆಟ್ಟಿ, ಕಾಲೇಜ್ಗೆ ಮಾತ್ರ ಸೀಮಿತವಾಗದೇ ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಯಡೆಗೆ ವಿಶೇಷ ಗಮನ ಹರಿಸಿದ್ದಾರೆ. ಸಿಂಧನೂರು ತಾಲೂಕಿನಲ್ಲಿ ಬಯಲು ಶೌಚಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಪಣ ತೊಟ್ಟಿದ್ದು, ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸ್ತಿದ್ದಾರೆ.
ತಮ್ಮ ಕಾಲೇಜ್ನ ಎನ್ಎಸ್ಎಸ್ ವಿದ್ಯಾರ್ಥಿಗಳು ಹಾಗೂ ಸ್ನೇಹಿತರ ಸಹಕಾರದಿಂದ ಮೂರು ತಿಂಗಳಲ್ಲಿ ತಾಲೂಕಿನ ಕನ್ನಾರಿ ಗ್ರಾಮದಲ್ಲಿ 40, ಮಲದಿನ್ನಿ ಕ್ಯಾಂಪ್ನಲ್ಲಿ 12, ರಾಮಾ ಕ್ಯಾಂಪ್ನಲ್ಲಿ 23, ವೆಂಕಂಟೇಶ್ವರ ಕ್ಯಾಂಪ್ನಲ್ಲಿ 22, ಚಿಂತಮಾನದೊಡ್ಡಿಯಲ್ಲಿ 35 ಶೌಚಾಲಯಗಳನ್ನ ನಿರ್ಮಿಸಿದ್ದಾರೆ. ಇದೂವರೆಗೆ 15 ಲಕ್ಷ ಹಣ ಖರ್ಚು ಮಾಡಿದ್ದು, ಫಲಾನುಭವಿಗಳಿಗೆ ಸರ್ಕಾರ ಹಣ ನೀಡಿದಾಗ ಮರಳಿ ಪಡೆಯುತ್ತಾರೆ.
ಅಷ್ಟೇ ಅಲ್ಲ, ಸತ್ಯನಾರಾಯಣ ಶೆಟ್ಟಿ ಅವರು ನೀಡಿದ 50 ಸಾವಿರ ರೂಪಾಯಿ ದೇಣಿಗೆಯಿಂದ ಬಳ್ಳಾರಿಯ ಶಿವಯೋಗಿ ಚನ್ನಬಸವೇಶ್ವರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ 328 ಗಿಡಗಳು ತಲೆಎತ್ತಿ ನಿಂತಿವೆ. ಅಷ್ಟೂ ಗಿಡಗಳಿಗೆ ಹನಿನೀರಾವರಿ ವ್ಯವಸ್ಥೆಯಾಗಿದ್ದು, ಬಿಸಿಯೂಟದ ತರಕಾರಿಗಳನ್ನೂ ಇಲ್ಲೆ ಬೆಳೆಯಲಾಗುತ್ತಿದೆ. ಜೊತೆಗೆ ತಮ್ಮ ಕಾಲೇಜಿನಲ್ಲಿ ಓದುವ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನೂ ನೀಡುತ್ತಿದ್ದಾರೆ.
https://www.youtube.com/watch?v=GuodHB2WCIg