ಬೆಂಗಳೂರು: ಸಿದ್ದರಾಮಯ್ಯನವರ ವೇಶ್ಯೆ ಹೋಲಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಇದೀಗ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಹ ಹರಿಹಾಯ್ದಿದ್ದು, ವಿವೇಚನೆಯೇ ಇಲ್ಲ ಎಂದು ಸಿದ್ದರಾಮಯ್ಯನವರ ಹೆಸರು ಹೇಳದೆ ಪರೋಕ್ಷವಾಗಿ ಟೀಕಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ವಿಧಾನಸಭೆಯಲ್ಲಿ ಶಾಸಕರಿಗೆ ಅವಕಾಶ ಸಿಕ್ಕಾಗಲೆಲ್ಲಾ ಸಂಧಿ, ಸಮಾಸ ಹೇಳಿಕೊಡುವ ಮೇಷ್ಟ್ರಿಗೆ ಯಾವ ಗಾದೆಯನ್ನು, ಯಾವ ಸಂದರ್ಭದಲ್ಲಿ, ಯಾರನ್ನುದ್ದೇಶಿಸಿ ಹೇಳಬೇಕೆಂಬ ವಿವೇಚನೆ ಇಲ್ಲದಿರುವುದು ವಿಪರ್ಯಾಸ” ಎಂದು ಕಿಡಿ ಕಾರಿದ್ದಾರೆ.
ವಿಧಾನಸಭೆಯಲ್ಲಿ ಶಾಸಕರಿಗೆ ಅವಕಾಶ ಸಿಕ್ಕಾಗಲೆಲ್ಲಾ ಸಂಧಿ, ಸಮಾಸ ಹೇಳಿಕೊಡುವ ಮೇಸ್ಟ್ರಿಗೆ ಯಾವ ಗಾದೆಯನ್ನು, ಯಾವ ಸಂದರ್ಭದಲ್ಲಿ, ಯಾರನ್ನುದ್ದೇಶಿಸಿ ಹೇಳಬೇಕೆಂಬ ವಿವೇಚನೆ ಇಲ್ಲದಿರುವುದು ವಿಪರ್ಯಾಸ!
— S.Suresh Kumar (@nimmasuresh) September 1, 2019
ಸಿದ್ದರಾಮಯ್ಯನವರು ಜೆಡಿಎಸ್ ಟೀಕಿಸುವ ಭರದಲ್ಲಿ, ಕುಣಿಯಲು ಬಾರದ ವೇಶ್ಯೆ ನೆಲ ಡೊಂಕು ಎಂದಿದ್ದಳಂತೆ ಹಂಗೆ ಜೆಡಿಎಸ್ ಲೆಕ್ಕ ಎಂದು ವಿವಾದಾತ್ಮಕ ಗಾದೆಯನ್ನು ಹೇಳಿದ್ದರು. ಸಿದ್ದರಾಮಯ್ಯನವರು ಉಚ್ಚರಿಸಿದ ಈ ಗಾದೆ ಮಾತು ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಸಂಚಲ ಸೃಷ್ಟಿಸಿದೆ. ಪರ ವಿರೋಧದ ಟೀಕೆಗಳು ವ್ಯಕ್ತವಾಗುತ್ತಿವೆ.
ಈ ಕುರಿತು ಸ್ವತಃ ಸಿದ್ದರಾಮಯ್ಯನವರು ಸ್ಪಷ್ಟನೆ ನೀಡಿ, ಇದು ನಮ್ಮ ಕಡೆ ಆಡುಭಾಷೆಯಲ್ಲಿ ಹೇಳುವ ಗಾದೆ ಮಾತು. ನಾನು ಜೆಡಿಎಸ್ಗೆ ಹೇಳಿದ್ದಲ್ಲ, ಬಿಜೆಪಿಗೆ ಹೇಳಿದ್ದು. ಇದೀಗ ಬಿಜೆಪಿಯವರು ಏನು ಆಡಳಿತವನ್ನು ಚೆನ್ನಾಗಿ ನಡೆಸುತ್ತಿದ್ದಾರೆಯೇ ಅದಕ್ಕೆ ಹೇಳಿದ್ದು ಎಂದು ಸ್ಪಷ್ಟನೆ ನೀಡಿದ್ದರು. ಆದರೆ, ಯಾರಿಗೇ ಹೇಳಲಿ ಇಂತಹ ಹೇಳಿಕೆಯನ್ನು ನೀಡುವಾಗ ಎಚ್ಚರಿಕೆ ವಹಿಸಬೇಕಿತ್ತು ಎಂಬುದು ಹಲವು ನಾಯಕರ ಅಭಿಪ್ರಾಯವಾಗಿದೆ.
ಶನಿವಾರ ಈ ಕುರಿತು ಕಂದಾಯ ಸಚಿವ ಆರ್.ಅಶೋಕ್ ಪ್ರತಿಕ್ರಿಯಿಸಿ, ಮಹಿಳೆಯರ ಕುರಿತು ಅಪಮಾನದ ಹೇಳಿಕೆ ನೀಡುವುದು ತಪ್ಪು. ಯಾವುದಕ್ಕೋ ಹೋಲಿಕೆ ಮಾಡುವುದು ಸರಿಯಲ್ಲ. ಅವರ ಹೇಳಿಕೆಯಿಂದ ಮಹಿಳಾ ಸಮಾಜಕ್ಕೂ ಅನ್ಯಾಯ ಮಾಡಿದಂತಿದೆ ಎಂದು ಸಿದ್ದರಾಮಯ್ಯನವರ ಹೇಳಿಕೆಯನ್ನು ಆರ್.ಅಶೋಕ್ ಖಂಡಿಸಿದ್ದರು.
ಇಂದು ಬೆಳಗ್ಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ ಎಂದು ಸುಮ್ಮನಿದ್ದೇನೆ. ಇಲ್ಲವಾಗಿದ್ದರೆ, ಅವರ ವಿರುದ್ಧವೂ ಕೆಟ್ಟ ಭಾಷೆ ಬಳಸುತ್ತಿದ್ದೆ. ನನಗೂ ಕೆಟ್ಟ ಭಾಷೆ ಬಳಸುವುದು ಗೊತ್ತಿದೆ ಎಂದು ಗುಡಿಗಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪ್ರಧಾನಿ ಮೋದಿ ವಿರುದ್ಧ ಸಿದ್ಧರಾಮಯ್ಯನವರು ಬಳಸುತ್ತಿರುವ ಭಾಷೆ ಸರಿಯಿಲ್ಲ. ಸಿದ್ದರಾಮಯ್ಯನವರಿಗೆ ನಾನು ವೈಯಕ್ತಿಕವಾಗಿ ಪ್ರಾರ್ಥನೆ ಮಾಡುತ್ತೇನೆ. ವಿರೋಧ ಪಕ್ಷವಾಗಿ ಬೇಕಾದಷ್ಟು ಟೀಕೆ ಮಾಡಿ ತೊಂದರೆ ಇಲ್ಲ. ಆದರೆ ಪ್ರಧಾನಿ ಮೋದಿ ಹಾಗೂ ಯಡಿಯೂರಪ್ಪನವರ ಬಗ್ಗೆ ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ. ನರೇಂದ್ರ ಮೋದಿ ಕೋಮುವಾದಿ, ಕೊಲೆಗಡುಕ ಎನ್ನುತ್ತಾರೆ. ಸುಳ್ಳಿನ ಸರದಾರ ಎಂದು ಸಿದ್ದರಾಮಯ್ಯ ಹಗುರವಾದ ಪದ ಬಳಕೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹೀಗೆ ಸಿದ್ದರಾಮಯ್ಯನವರ ಹೇಳಿಕೆಗಳ ಕುರಿತು ರಾಜ್ಯ ರಾಹಕೀಯ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.