ಶಿಮ್ಲಾ: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ದೇಶದ ಪ್ರಗತಿಗಾಗಿ ಶ್ರಮಿಸುತ್ತಿರುವ ಮಣ್ಣಿನ ಮಗ ಎಂದು ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಟಿ ಕಂಗನಾ ರಣಾವತ್ (Kangana Ranaut) ಹೇಳಿದ್ದಾರೆ.
ಕುಲು ಜಿಲ್ಲೆಯ ಜಗತ್ ಖಾನಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೋದಿಯವರು ಉತ್ತಮ ಆಡಳಿತದ ಪ್ರತೀಕ. ಪ್ರಧಾನಿಗೆ ಪಹಾರಿ ಸೇರಿದಂತೆ ಹಲವಾರು ಭಾಷೆಗಳು ತಿಳಿದಿವೆ. ಸೋನಿಯಾ ಗಾಂಧಿಯಂತೆ (Sonia Gandhi) ಹಿಂದಿ ಗೊತ್ತಿಲ್ಲದ ಪ್ರಧಾನಿ ಮೋದಿ ಇಟಲಿಯವರಲ್ಲ. ಅವರು ಮಣ್ಣಿನ ಮಗ, ಬಡ ಕುಟುಂಬದಲ್ಲಿ ಹುಟ್ಟಿ ದೇಶದ ಕಲ್ಯಾಣ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಒಂದೆಡೆ ಮೋದಿಯವರ ಉತ್ತಮ ಆಡಳಿತವಿದ್ದರೆ ಮತ್ತೊಂದೆಡೆ ಕಾಂಗ್ರೆಸ್ನ ಭ್ರಷ್ಟಾಚಾರವಿದೆ. ಹೀಗಾಗಿ ಹಿಮಾಚಲ ಪ್ರದೇಶದ ಜನರು ಜೂನ್ 1 ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಮನಸ್ಸು ಮಾಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಬುಲೆಟ್ ರೈಲು ಎಲ್ಲಿ- ಅಟಲ್ ಸೇತುವನ್ನು ಹೊಗಳಿದ್ದ ರಶ್ಮಿಕಾಗೆ ಅಂಜಲಿ ನಿಂಬಾಳ್ಕರ್ ಪ್ರಶ್ನೆ
ಇದೇ ವೇಳೆ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜೈ ರಾಮ್ ಠಾಕೂರ್ ಅವರು ಫ್ಲಾಪ್ ಚಿತ್ರ ಮಾಡುತ್ತಿದ್ದಾರೆ ಎಂಬ ಹೇಳಿಕೆಗಾಗಿ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರನ್ನು ತರಾಟೆಗೆ ತೆಗೆದುಕೊಂಡ ರಣಾವತ್, ಠಾಕೂರ್ ಅವರು ಐದು ವರ್ಷ ಮುಖ್ಯಮಂತ್ರಿಯಾಗಿ ಸೂಪರ್ ಹಿಟ್ ಅಧಿಕಾರವನ್ನು ಹೊಂದಿದ್ದರು. ಆದರೆ ಸುಖು ಅವರು ಕೇವಲ 15 ತಿಂಗಳುಗಳಲ್ಲಿ ತಮ್ಮ ಕೆಲಸದಲ್ಲಿ ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸುಖು ಈ ಹಿಂದೆ ಕಂಗನಾ ಒಳ್ಳೆಯ ನಟಿ ಎಂದು ಹೇಳಿದ್ದರು. ಆದರೆ ಆಕೆಯ ಚಿತ್ರಕಥೆಗಾರರು ಠಾಕೂರ್ ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥ ರಾಜೀವ್ ಬಿಂದಾಲ್ ಆಗಿರುವುದರಿಂದ ಅವರ ಚಿತ್ರ ವಿಫಲವಾಯಿತು ಎಂದಿದ್ದರು.