ವಾರಣಾಸಿ: ಉತ್ತರ ಪ್ರದೇಶದ ಗಂಗೆಯ ಬೀಡು, ದೇಗುಲ ನಗರಿ, ಸ್ವಕ್ಷೇತ್ರ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭರ್ಜರಿ ಶಕ್ತಿ ಪ್ರದರ್ಶನ ನಡೆಸಿದ್ದಾರೆ.
ಬನಾರಸ್ ಹಿಂದೂ ವಿವಿಗೆ ತೆರಳಿ ಪಂಡಿತ್ ಮದನ್ ಮೋಹನ್ ಮಾಳವೀಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಕಾಶಿಯ ಬೀದಿಗಳಲ್ಲಿ ಕೇಸರಿ ಕಹಳೆಯೊಂದಿಗೆ ಮೋದಿ 6 ಕಿ.ಮೀ ಮಹಾ ರೋಡ್ ಶೋ ನಡೆಸಿದ್ದಾರೆ.
ಲಂಕಾ ಘಾಟ್, ಅಸ್ಸಿ ಘಾಟ್, ಸೋನಾರ್ಪುರ, ಮದನಪುರ್ ಮಾರ್ಗವಾಗಿ ಸಾಗಿದ ಮೆರವಣಿಗೆಯ ರಸ್ತೆಯ ಇಕ್ಕೆಲ್ಲಗಳಲ್ಲೂ ಪುಷ್ಪವೃಷ್ಟಿ ಆಯಿತು. ಕಣ್ಣು ಹಾಯಿಸಿದ ದೂರವೂ ಜಮಾಯಿಸಿ ತಮ್ಮ ಪ್ರೀತಿ, ಅಭಿಮಾನ ಲಕ್ಷಾಂತರ ಅಭಿಮಾನಿಗಳು ತೋರಿಸಿದರು. ಎಲ್ಲ ಕಡೆ “ಹರ್ ಹರ್ ಮೋದಿ, ಘರ್ ಘರ್ ಮೋದಿ” ಜೈಕಾರ ಕೇಳಿಸುತಿತ್ತು.
ಮಾಧ್ಯಮ ವರದಿಗಳ ಪ್ರಕಾರ ಅಂದಾಜು 4 ಲಕ್ಷಕ್ಕೂ ಅಧಿಕ ಜನ ಈ ರೋಡ್ ಶೋನಲ್ಲಿ ಭಾಗವಹಿಸಿದ್ದರು. ಹಲವು ಕಿ.ಮೀ ಉದ್ದ ಜನಸಾಗರವೇ ಸೇರಿತ್ತು. ರಸ್ತೆಯ ಇಕ್ಕೆಲದಲ್ಲಿ, ಮಹಡಿಯಲ್ಲಿ ಎಲ್ಲಿ ನೋಡಿದರಲ್ಲಿ ಜನಸಾಗರವೇ ಸೇರಿತ್ತು. ಒಂದು ರೀತಿಯಲ್ಲಿ ಕಾಶಿಯ ವಿಶ್ವನಾಥನ ಸನ್ನಿಧಿ ಕೇಸರಿಮಯವಾಗಿತ್ತು.
ಬಿಹಾರದ ಧರ್ಬಂಗ್ನಲ್ಲಿ ಪ್ರಚಾರ ಮುಗಿಸಿ ಬರುವಲ್ಲಿ ತಡವಾದ ಕಾರಣ ಮಧ್ಯಾಹ್ನ 3 ಗಂಟೆಗೆ ಶುರುವಾಗಬೇಕಿದ್ದ ಈ ಮೆಗಾ ರೋಡ್ಶೋ ಸಂಜೆ 5.15ರ ಸುಮಾರಿಗೆ ಆರಂಭವಾಯಿತು.
ಪ್ರಧಾನಿ ಮೋದಿ ಅವರ ಈ ರ್ಯಾಲಿಯಲ್ಲಿ ಭಾಗವಹಿಸುವಂತೆ ವಾರಣಾಸಿಯ ಪ್ರತಿಯೊಂದು ಮನೆಗೂ ತೆರಳಿ ಕಾರ್ಯಕರ್ತರು ಮನವಿ ಮಾಡಿಕೊಂಡಿದ್ದರು. ಮೋದಿ ಮೇಲಿನ ಅಭಿಮಾನ, ಕಾರ್ಯಕರ್ತರ ಮನವಿಗೆ ಸ್ಪಂದಿಸಿದ ಜನತೆ ಪ್ರಧಾನಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಶುಕ್ರವಾರ ಮೋದಿ ನಾಮಪತ್ರ ಸಲ್ಲಿಸಲಿದ್ದು, ಮೇ 19ಕ್ಕೆ ವಾರಣಾಸಿಯಲ್ಲಿ ಚುನಾವಣೆ ನಡೆಯಲಿದೆ.