ಅಯೋಧ್ಯೆ: ಜನವರಿ 22ರಂದು ಅಯೋಧ್ಯೆಗೆ (Ayodhya) ಬರಲು ಮನಸ್ಸು ಮಾಡಬೇಡಿ. ಜ.22ರ ನಂತರ ದೇವನಗರಿಗೆ ಭೇಟಿ ನೀಡಿ ಎಂದು ರಾಮ ಭಕ್ತರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ವಿನಂತಿ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರಿಂದು ಅಯೋಧ್ಯೆಯಲ್ಲಿ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣ (Maharishi Valmiki International Airport) ಲೋಕಾರ್ಪಣೆಗೊಳಿಸಿ ಬಳಿಕ ಬೃಹತ್ ರ್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು. ಇದನ್ನೂ ಓದಿ: Modi In Ayodhya: ಪ್ರಧಾನಿ ಮೋದಿಯಿಂದ ʻಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣʼ ಲೋಕಾರ್ಪಣೆ
ಜನವರಿ 22ರಂದು ನಡೆಯುವ ಕಾರ್ಯಕ್ರಮದ ಭಾಗವಾಗಲು ಪ್ರತಿಯೊಬ್ಬರೂ ಅಯೋಧ್ಯೆಗೆ (Ayodhya) ಬರಲು ಬಯಸುತ್ತಾರೆ. ಆದ್ರೆ ಎಲ್ಲರೂ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂಬುದು ನಿಮಗೂ ತಿಳಿದಿದೆ. ನಾನು ನಿಮ್ಮೆಲ್ಲರಿಗೂ ವಿನಂತಿ ಮಾಡ್ತೀನಿ. ಆದಿನ ಔಪಚಾರಿಕ ಕಾರ್ಯಕ್ರಮ ಪೂರ್ಣಗೊಳಿಸಿದ ನಂತರ ನೀವು ಒಂದು ವಾರ ಬಿಟ್ಟು, ತಿಂಗಳು ಬಿಟ್ಟು ಅಥವಾ ವರ್ಷ ಬಿಟ್ಟು ಬಂದರೂ ರಾಮಮಂದಿರ ನಿಮಗಾಗಿ ಕಾದಿರುತ್ತದೆ. ಜ.22ರ ನಂತರ ಎಲ್ಲರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಅಯೋಧ್ಯೆಗೆ ಬರಬಹುದು. ಆದ್ರೆ ಅಂದು ಮಾತ್ರ ಅಯೋಧ್ಯೆಗೆ ಬರಲು ಮನಸ್ಸು ಮಾಡಬೇಡಿ ಎಂದು ರಾಮ ಭಕ್ತರಿಗೆ ವಿನಂತಿಸುತ್ತೇನೆ ಎಂದು ತಿಳಿಸಿದರು.
ಇಡೀ ವಿಶ್ವವೇ ಆ ಕ್ಷಣಕ್ಕಾಗಿ ಕಾಯುತ್ತಿದೆ:
ಜನವರಿ 22 ರಂದು ಅಯೋಧ್ಯೆ ರಾಮಮಂದಿರದಲ್ಲಿ (Ram Mandir) ನಡೆಯುವ ಪ್ರಾಣ ಪ್ರತಿಷ್ಟಾಪನೆಗಾಗಿ ಇಡೀ ವಿಶ್ವವೇ ಕುತೂಹಲದಿಂದ ಕಾಯುತ್ತಿದೆ. ಅಂದು 140 ಕೋಟಿ ಭಾರತೀಯರು ಬೆಳಕಿನ ಹಬ್ಬ ದೀಪಾವಳಿ ಆಚರಿಸಬೇಕು. ಅಂದು ಮನೆ ಮನೆಯಲ್ಲೂ `ಶ್ರೀರಾಮ ಜ್ಯೋತಿ’ಯನ್ನು ಬೆಳಗಿಸಬೇಕು. ಅಂದು ಇಡೀ ಭಾರತವೇ `ರಾಮಜ್ಯೋತಿ’ಯಿಂದ ಜಗಮಗಿಸುತ್ತಿರಬೇಕು ಎಂದು ಕರೆ ನೀಡಿದರು.
ಅಲ್ಲದೇ ಸಣ್ಣ ಪ್ರಮಾಣದಲ್ಲಿ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುವರಿಂದ ಹಿಡಿದು ದೊಡ್ಡಮಟ್ಟದ ವರೆಗಿನ ವ್ಯಾಪಾರ ವಹಿವಾಟು ಅಭಿವೃದ್ಧಿಯಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಇದನ್ನೂ ಓದಿ: ಮೋದಿ ಶ್ರೀರಾಮನನ್ನು ಅಯೋಧ್ಯೆಗೆ ಕರೆತರಲಿದ್ದಾರೆ: ಯೋಗಿ ಆದಿತ್ಯನಾಥ್
ಅಭಿವೃದ್ಧಿ ಸಾಧಿಸಲು ಪರಂಪರೆ ಉಳಿಸಿಕೊಳ್ಳಬೇಕು:
ಇಂದು ಯಾವುದೇ ದೇಶ ಅಭಿವೃದ್ಧಿಯ ಹೊಸ ಹಂತಗಳನ್ನ ತಲುಪಲು ಬಯಸಿದರೆ, ಮೊದಲು ತನ್ನ ಪರಂಪರೆಯನ್ನು ಉಳಿಸಿಕೊಳ್ಳಬೇಕು. ಶ್ರೀರಾಮನ ಭವ್ಯಮಂದಿರ ನಿರ್ಮಾಣವಾದ ನಂತರ ಇಲ್ಲಿಗೆ ಬರುವವರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರ ಸಾವಿರಾರು ಕೋಟಿ ರೂ.ಗಳ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದೆ. ಮುಖ್ಯವಾಗಿ ಅಯೋಧ್ಯೆಯ ಅಭಿವೃದ್ಧಿಯು ಇಲ್ಲಿನ ಜನರಿಗೆ ಹೊಸ ಉದ್ಯೋಗಾವಕಾಶಗಳನ್ನ ಸೃಷ್ಟಿಸುತ್ತದೆ ಎಂದು ಮೋದಿ ತಿಳಿಸಿದರು. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಯಂದು ಪ್ರತಿಯೊಬ್ಬರೂ ಮನೆಯಲ್ಲಿ ದೀಪ ಬೆಳಗಿಸಿ: ಮೋದಿ ಕರೆ
ಅಯೋಧ್ಯೆ ಸ್ಮಾರ್ಟ್ ಆಗುತ್ತಿದೆ. ಇಂದು ಅಯೋಧ್ಯೆ ವಿಮಾನ ನಿಲ್ದಾಣ ಮತ್ತು ಅಯೋಧ್ಯಾ ಧಾಮ ರೈಲು ನಿಲ್ದಾಣ ಉದ್ಘಾಟನೆ ಮಾಡುವ ಸೌಭಾಗ್ಯ ನನಗೆ ಸಿಕ್ಕಿದ್ದು ಸಂತೋಷ. ಇಲ್ಲಿನ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಹೆಸರಿಟ್ಟಿರುವುದು ಸಂತಸ ತಂದಿದೆ. ರಾಮಾಯಣದ ಮೂಲಕ ಶ್ರೀರಾಮನ ಕೃತಿಗಳನ್ನು ಮಹರ್ಷಿ ವಾಲ್ಮೀಕಿ ನಮಗೆ ಪರಿಚಯಿಸಿದ್ದಾರೆ. ಆಧುನಿಕವಾಗಿ ಭಾರತ, ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಯೋಧ್ಯಾ ಧಾಮ ಇವೆಲ್ಲವೂ ರಾಮನೊಂದಿಗೆ ನಮ್ಮನ್ನು ಸಂಪರ್ಕಿಸುತ್ತದೆ. ಪ್ರಸ್ತುತ ಅಯೋಧ್ಯಾ ಧಾಮ ರೈಲು ನಿಲ್ದಾಣವು 10-15 ಸಾವಿರ ಜನರಿಗೆ ಸೇವೆ ಸಲ್ಲಿಸುವ ಸಾಮರ್ಥ್ಯ ಹೊಂದಿದೆ. ನಿಲ್ದಾಣದ ಸಂಪೂರ್ಣ ಅಭಿವೃದ್ಧಿಯ ನಂತರ, 60 ಸಾವಿರ ಜನರು ಪ್ರತಿದಿನ ರೈಲು ನಿಲ್ದಾಣದಿಂದ ಪ್ರಯೋಜನ ಪಡೆಯಲಿದ್ದಾರೆ ಎಂದು ಮೋದಿ ವಿವರಿಸಿದರು.