– ಹೊಳೆನರಸೀಪುರ ವಿಳಾಸಕ್ಕೆ ಸ್ಪೀಡ್ ಪೋಸ್ಟ್
ದಾವಣಗೆರೆ: ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದ ಗಡಿಯಾರ ಕಂಬದ ಬಳಿಯಿರುವ ಪ್ರಧಾನ ಅಂಚೆ ಕಚೇರಿಯಿಂದ ಶಾಸಕರಾದ ಹೆಚ್.ಡಿ ರೇವಣ್ಣ ಅವರ ವಿಳಾಸಕ್ಕೆ ಕ್ಯಾಂಡಲ್ ಬಾಕ್ಸನ್ನು ಸ್ಪೀಡ್ ಪೋಸ್ಟ್ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಯುವಮೋರ್ಚಾ ಅಧ್ಯಕ್ಷ ಶಿವನಗೌಡ ಪಾಟೀಲ್, ಪ್ರಧಾನಿ ಮೋದಿ ಅವರ ದೀಪದ ಕರೆಗೆ ಪರೋಕ್ಷವಾಗಿ ಓಗೊಟ್ಟಿರುವ ರೇವಣ್ಣ ಅವರಿಗೆ ನಮ್ಮ ಧನ್ಯವಾದಗಳು. ದೇಶ ವ್ಯಾಪ್ತಿ ಲಾಕ್ಡೌನ್ ಇರುವುದರಿಂದ ಮೇಣದ ಬತ್ತಿ ತರಲು ಹೊರಗೆ ಹೋದರೆ ಲಾಠಿ ಚಾರ್ಜ್ ಮಾಡುತ್ತಾರೆ ಎಂದು ಅಸಹಾಯಕತೆ ತೋರಿರುವುದು ನಮಗೆ ಗೊತ್ತಾಯಿತು ಎಂದು ಹೇಳಿದರು.
ಇಲ್ಲಿಯ ಮಣ್ಣಿನ ಕಣಕಣದಲ್ಲೂ ದೈವ ಸಾಕ್ಷಾತ್ಕಾರದ ಶಕ್ತಿ ಇದೆ. ಇಂತಹ ಪಾವನ ಮಣ್ಣಿನಲ್ಲಿ ಮನಃಪೂರ್ವಕವಾಗಿ ದೀಪ ಬೆಳಗುವ ಪ್ರಕ್ರಿಯೇ ನಿಜಕ್ಕೂ ದೈವ ಸಾಕ್ಷಾತ್ಕಾರದ ಸಮಾನ. ಸ್ವಾತಂತ್ರ್ಯ ಭಾರತದ ನಂತರ ಭಾರತೀಯರೆಲ್ಲರೂ ದೇಶದ ಒಳತಿಗಾಗಿ, ದೇಶದ ಜನರ ಪ್ರಾಣ ರಕ್ಷಣೆಗಾಗಿ ಪ್ರಧಾನಿಯವರ ಕರೆ ಯಶಸ್ವಿಯಾಗಬೇಕಾದರೆ ರೇವಣ್ಣರ ದೈವ ಭಕ್ತರ ಸಹಕಾರವೂ ಅತ್ಯವಶ್ಯಕ. ಆದ್ದರಿಂದ ಅವರ ಅಸಾಹಯಕತೆಯನ್ನು ಮನಗಂಡು ಹೊಳೆನರಸೀಪುರ ಮನೆಯ ವಿಳಾಸಕ್ಕೆ ಮೇಣದ ಬತ್ತಿ ಪ್ಯಾಕೆಟ್ಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿಕೊಡುತ್ತಿದ್ದೇವೆ ಎಂದಿದ್ದಾರೆ.
ತಾವು ಕುಟುಂಬ ಪರಿವಾರ ಸಮೇತರಾಗಿ ನಿರ್ಮಲ ಮನಸ್ಸಿನಿಂದ ದೇಶಕ್ಕೆ ಬಂದ ಕೊರೊನಾ ಕಂಟಕ ಹೊಡೆದೊಡಿಸಲು ನಮ್ಮ ಪ್ರಧಾನಿ ಅವರ ದೀಪ ಪ್ರಜ್ವಲನ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಅಲ್ಲದೇ ತಮ್ಮ ಪಕ್ಷದ ಯಾವುದಾದರೂ ಶಾಸಕರುಗಳು ಈ ಅಸಹಾಯಕತೆಯ ಅಳಲನ್ನು ತಮ್ಮ ಮುಂದೆ ತೋಡಿಕೊಂಡಿದ್ದರೆ ನಮಗೆ ತಿಳಿಸಿ. ನಾವು ಅವರಿಗೂ ಕಳುಹಿಸಿ ಕೊಡಲು ಸಿದ್ಧರಿದ್ದೇವೆ ಎಂದು ಯುವಮೋರ್ಚಾ ಕಾರ್ಯಕರ್ತರು ತಿಳಿಸಿದ್ದಾರೆ.