ಬೆಳಗಾವಿ: ಪ್ರಪಂಚದ 20 ರಾಷ್ಟ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಆದರೇ ಇಡೀ ಪ್ರಪಂಚದ ಚಿತ್ತ ಭಾರತದ ಮೇಲಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ, ಅವರು ಮತ್ತೆ ಪ್ರಧಾನಿ ಆಗುತ್ತಾರೆ ಎಂದು ಕೇಂದ್ರ ಸಚಿವ ಡಾ.ಹರ್ಷವರ್ಧನ್ ಭವಿಷ್ಯ ನುಡಿದಿದ್ದಾರೆ.
ಜಿಲ್ಲೆಯಲ್ಲಿ ವೈದ್ಯರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದ ಕೇಂದ್ರ ಸಚಿವರು, ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ ಮೋದಿ ಅವರು ಇಡೀ ಪ್ರಪಂಚವೇ ನಮ್ಮತ್ತ ನೋಡುವಂತೆ ಮಾಡಿದ್ದಾರೆ. ಕಾಂಗ್ರೆಸ್ನಿಂದ ರಫೆಲ್ ಹಾಗೂ ಡೈರಿ ಕುರಿತ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡದಿರುವುವುದೇ ಒಳಿತು. ಕಾಂಗ್ರೆಸ್ಸಿನವರ ಬಗ್ಗೆ ಮಾತನಾಡಿ ಸಮಯ ಹಾಳುಮಾಡುವುದ್ಯಾಕೆ ಎಂದು ಟಾಂಗ್ ನೀಡಿದ್ದಾರೆ.
ಪ್ರಧಾನಿ ಮೋದಿ ಕರ್ನಾಟಕದಿಂದ ಸ್ಪರ್ಧೆ ಮಾಡ್ತಾರೆ ಎಂಬ ವಿಚಾರ ಕೇವಲ ವದಂತಿ. ನನಗೆ ಈ ಕುರಿತು ಯಾವುದೇ ಮಾಹಿತಿ ಇಲ್ಲ. ಊಹಾಪೋಹಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ದೇಶದಲ್ಲಿ ಬಿಜೆಪಿ ಬಹುಮತ ಬರುವಷ್ಟು ಸೀಟುಗಳನ್ನು ಗೆಲ್ಲುತ್ತೆ. ಎಷ್ಟು ಸೀಟುಗಳು ಬರುತ್ತವೆ ಎನ್ನುವುದನ್ನು ಹೇಳುವುದಿಲ್ಲ. ಆದ್ರೆ ಕರ್ನಾಟಕದಲ್ಲಿ ಕಳೆದ ಬಾರಿಯ 17 ಸೀಟುಗಳಿಗಿಂತ ಹೆಚ್ಚು ಬಿಜೆಪಿ ಗೆಲ್ಲುತ್ತದೆ. ಕೊನೆಗಳಿಗೆಯಲ್ಲಿ ರಾಜ್ಯದಲ್ಲಿ ಕ್ಲೀನ್ಸ್ವಿಪ್ ಕೂಡ ಆಗಬಹುದು. ಹಾಗೆಯೇ ಪಕ್ಷದ ಶಿಸ್ತಿನ ಸಿಪಾಯಿ ಸುರೇಶ್ ಅಂಗಡಿ ಪ್ರಾಮಾಣಿಕ ಕಾರ್ಯಕರ್ತನಾಗಿ ಕೆಲಸ ಮಾಡಿದ್ದಾರೆ ಎಂದು ಸಂಸದ ಹರ್ಷವರ್ಧನ್ ಹೊಗಳಿದರು.