ಚೆನ್ನೈ: ಆಂಜನೇಯ ದೇವರಿಗೆ ಪೂಜೆ ಮಾಡುವ ವೇಳೆ 11 ಅಡಿ ಎತ್ತರದಿಂದ ಅರ್ಚಕರೊಬ್ಬರು ಬಿದ್ದು ಸಾವನ್ನಪ್ಪಿರುವ ದುರ್ಘಟನೆ ತಮಿಳುನಾಡಿನಲ್ಲಿ ನಾಮಕ್ಕಲ್ ದೇಗುಲದಲ್ಲಿ ನಡೆದಿದೆ.
ನಾಮಕ್ಕಲ್ನಲ್ಲಿ 18 ಅಡಿ ಎತ್ತರದ ಆಂಜನೇಯನ ವಿಗ್ರಹವಿರುವ ದೇಗುಲವಿದೆ. ಅಲ್ಲಿ ದೇವರ ಪೂಜೆ ವೇಳೆ ಮಾಲಾರ್ಪಣೆ ಮಾಡುವಾಗ ಏಣಿಯಿಂದ ಬಿದ್ದು ಅರ್ಚಕರಾದ ವೆಂಕಟೇಶ್(53) ಸಾವನ್ನಪ್ಪಿದ್ದಾರೆ. ಭಾನುವಾರ ದೇವಾಲಯದಲ್ಲಿ ಆಂಜನೇಯ ಸ್ವಾಮಿಗೆ ಭಕ್ತರೊಬ್ಬರು ವಿಶೇಷ ಹಾರವನ್ನು ನೀಡಿದ್ದರು. ಈ ವೇಳೆ ಕಬ್ಬಿಣದ ಮೆಟ್ಟಿಲ ಮೇಲೆ ನಿಂತು ದೇವರಿಗೆ ಹಾರ ಹಾಕಲು ಮುಂದಾಗುತ್ತಿದ್ದಾಗ ಕಾಲು ಜಾರಿ 11 ಅಡಿ ಎತ್ತರದಿಂದ ಅರ್ಚಕರು ಕೆಳಗೆ ಬಿದ್ದಿದ್ದಾರೆ.
ಕಾಲು ಜಾರಿದ ಪರಿಣಾಮ ನೇರವಾಗಿ ಕೆಳಗೆ ಕಲ್ಲಿನ ಮೇಲೆ ಬಿದ್ದ ಅರ್ಚಕರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಸ್ಥಳದಲ್ಲಿದ್ದವರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಮೊದಲೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಅರ್ಚಕರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಮೃತಟ್ಟಿದ್ದಾರೆ. ಈ ಘಟನೆ ನಡೆದ ಬಳಿಕ ಕೆಲವು ಗಂಟೆಗಳ ಕಾಲ ದೇಗುಲಕ್ಕೆ ಬೀಗ ಹಾಕಲಾಗಿತ್ತು.
ದೇವಸ್ಥಾನದ ಇತಿಹಾಸದಲ್ಲೇ ಈ ರೀತಿ ದುರ್ಘಟನೆ ನಡೆದಿರಲಿಲ್ಲ. ಈ ವಿಚಾರ ದೇಗುಲದ ಸದಸ್ಯರಿಗೆ ನೋವು ತಂದಿದೆ. ವೆಂಕಟೇಶ್ ಅವರು ಬಹಳ ವರ್ಷಗಳಿಂದ ಅರ್ಚಕರಾಗಿ ದೇವರಿಗೆ ಸೇವೆ ಸಲ್ಲಿಸುತ್ತಿದ್ದರು. ಅವರೊಡನೆ ಸಹೋದರ ನಾಗರಾಜನ್ ಅವರು ಕೂಡ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದರು ಎಂದು ದೇವಸ್ಥಾನದ ಆಡಳಿತ ಮಂಡಳಿ ಸಂತಾಪ ಸೂಚಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv