ನವದೆಹಲಿ: 2012 ರಲ್ಲಿ ಮಹಾರಾಷ್ಟ್ರದಲ್ಲಿ (Maharashtra) ಎರಡು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿ ಕೊಂದು ಗಲ್ಲು ಶಿಕ್ಷೆಗೆ ಒಳಗಾಗಿದ್ದ ಅಪರಾಧಿಯ ದಯಾ ಅರ್ಜಿಯನ್ನು (Mercy Plea) ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ತಿರಸ್ಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ನಂತರ ರಾಷ್ಟ್ರಪತಿಗಳು ತಿರಸ್ಕರಿಸಿದ ಮೂರನೇ ದಯಾ ಅರ್ಜಿ ಇದಾಗಿದೆ.
ಅಕ್ಟೋಬರ್ 3, 2019 ರಂದು ಸುಪ್ರೀಂ ಕೋರ್ಟ್ (Supreme Court) ಅಪರಾಧಿ ರವಿ ಅಶೋಕ್ ಘುಮಾರೆಗೆ ಮರಣದಂಡನೆಯನ್ನು ಎತ್ತಿ ಹಿಡಿದಿತ್ತು. ಅಪರಾಧಿ ʻದೈಹಿಕ ಬಯಕೆಗಳʼ ಮೇಲೆ ಯಾವುದೇ ನಿಯಂತ್ರಣ ಹೊಂದಿಲ್ಲ. ಆತ ಲೈಂಗಿಕ ಬಯಕೆ ತಣಿಸಲು ಎಲ್ಲಾ ನೈಸರ್ಗಿಕ, ಸಾಮಾಜಿಕ ಮತ್ತು ಕಾನೂನು ಮಿತಿಗಳನ್ನು ಮೀರಿದ್ದಾನೆ ಎಂದು ಕೋರ್ಟ್ ಈ ವೇಳೆ ಅಭಿಪ್ರಾಯಪಟ್ಟಿತ್ತು. ಇದನ್ನೂ ಓದಿ: ಆಳಂದದಲ್ಲಿ ಗುತ್ತೇದಾರ್ ಸೂತ್ರದಂತೆ ಮತಗಳವು – ಎಸ್ಐಟಿಯಿಂದ ಚಾರ್ಜ್ಶೀಟ್
ನ್ಯಾಯಮೂರ್ತಿ ಸೂರ್ಯ ಕಾಂತ್ (ಈಗ ಭಾರತದ ಮುಖ್ಯ ನ್ಯಾಯಮೂರ್ತಿ) ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು 2:1ರ ಬಹುಮತದ ತೀರ್ಪು ನೀಡಿತ್ತು. ಅಪರಾಧಿ ಇನ್ನೂ ಅರಳದ ಜೀವವನ್ನು ನಿರ್ದಯವಾಗಿ ಕೊನೆಗೊಳಿಸಿದ್ದಾನೆ. ಎರಡು ವರ್ಷದ ಮಗುವಿನೊಂದಿಗೆ ಅಸ್ವಾಭಾವಿಕ ಅಪರಾಧ ಮಾಡಿದ ಅವನ ಕೃತ್ಯವು ವಿಕೃತ ಮನಸ್ಸನ್ನು ಪ್ರದರ್ಶಿಸುತ್ತದೆ. ಇದು ಕ್ರೌರ್ಯದ ಭಯಾನಕತೆಯನ್ನು ಬಿಚ್ಚಿಡುತ್ತದೆ ಎಂದು ಪೀಠ ಈ ವೇಳೆ ಹೇಳಿತ್ತು.
ಮೇಲ್ಮನವಿ ಸಲ್ಲಿಸಿದ ಅಪರಾಧಿ 2 ವರ್ಷದ ಮಗುವನ್ನು ಅಪಹರಿಸಿ, ಆಕೆ ಕೊನೆಯುಸಿರೆಳೆಯುವವರೆಗೂ ನಾಲ್ಕರಿಂದ ಐದು ಗಂಟೆಗಳ ಕಾಲ ಆಕೆಗೆ ಹಿಂಸೆ ನೀಡುತ್ತಲೇ ಇದ್ದ. ಮಗುವಿಗೆ ಪ್ರೀತಿ, ವಾತ್ಸಲ್ಯ ಮತ್ತು ರಕ್ಷಣೆಯನ್ನು ತೋರಿಸುವ ಬದಲು, ಅವಳನ್ನು ತನ್ನ ಕಾಮಕ್ಕೆ ಬಲಿಪಶುವನ್ನಾಗಿ ಮಾಡಿದ್ದಾನೆ ಎಂಬುದನ್ನು ಪೀಠ ಗಮನಿಸಿ ಕೆಳಹಂತದ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿತ್ತು.
ಮಾರ್ಚ್ 6, 2012 ರಂದು ಮಹಾರಾಷ್ಟ್ರದ ಜಲ್ನಾ ನಗರದ ಇಂದಿರಾನಗರ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಘುಮಾರೆ ಮಗುವಿಗೆ ಚಾಕೊಲೇಟ್ ನೀಡುವ ಆಮಿಷ ಒಡ್ಡಿ, ಕರೆದೊಯ್ದು ಅತ್ಯಾಚಾರ ಎಸಗಿ, ಹತ್ಯೆ ಮಾಡಿದ್ದ.
ವಿಚಾರಣಾ ನ್ಯಾಯಾಲಯವು ಅವನನ್ನು ಅಪರಾಧಿ ಎಂದು ಘೋಷಿಸಿ ಸೆಪ್ಟೆಂಬರ್ 16, 2015 ರಂದು ಮರಣದಂಡನೆ ವಿಧಿಸಿತ್ತು. ಅವನ ಮರಣದಂಡನೆಯನ್ನು ಬಾಂಬೆ ಹೈಕೋರ್ಟ್ ಜನವರಿ 2016 ರಲ್ಲಿ ಎತ್ತಿಹಿಡಿದಿತ್ತು. ಇದನ್ನೂ ಓದಿ: ಖ್ಯಾತ ಬಹುಭಾಷಾ ನಟಿ ಮೇಲೆ ಲೈಂಗಿಕ ದೌರ್ಜನ್ಯ – 6 ಆರೋಪಿಗಳಿಗೆ 20 ವರ್ಷ ಜೈಲು

