10ನೇ ಬಾರಿಗೆ ಗರ್ಭಿಣಿ – ಸಂತಾನ ನಿಯಂತ್ರಣ ಮಾಡ್ಕೊಳ್ಳಿ ಎಂದಿದ್ದಕ್ಕೆ ಆಸ್ಪತ್ರೆಯಿಂದ್ಲೇ ಮಹಿಳೆ ಎಸ್ಕೇಪ್!

Public TV
2 Min Read
PREGNENT

ತಿರುಚ್ಚಿ (ತಮಿಳುನಾಡು): 10ನೇ ಬಾರಿ ಗರ್ಭಿಣಿಯಾಗಿ ಆಸ್ಪತ್ರೆಗೆ ಬಂದ ಮಹಿಳೆಗೆ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ, ಹೆರಿಗೆ ಬಳಿಕ ಸಂತಾನ ನಿಯಂತ್ರಣ ಸರ್ಜರಿ ಮಾಡಿಸಿಕೊಳ್ಳಿ ಎಂದು ವೈದ್ಯರು ಸಲಹೆ ನೀಡಿದ್ದಕ್ಕೆ ಸಂಬಂಧಿಕರ ಜೊತೆ ಆಸ್ಪತ್ರೆಯಿಂದಲೇ ಪರಾರಿಯಾದ ಘಟನೆ ಇಲ್ಲಿನ ವೆತ್ತಿಯಾಂಗುಡಿ ಎಂಬಲ್ಲಿ ನಡೆದಿದೆ. ಮಹಿಳೆ ಹಿಮೋಗ್ಲೋಬಿನ್ ಕೊರತೆಯಿಂದ ಬಳಲುತ್ತಿದ್ದು, ಆಕೆ ತುಂಬು ಗರ್ಭಿಣಿಯಾಗಿದ್ದಳು. ಇನ್ನೊಂದು ವಾರಕ್ಕೆ ಆಕೆಗೆ ಹೆರಿಗೆಯಾಗುವ ಸಾಧ್ಯತೆಯಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಅರಂತಂಗಿ ಸಮೀಪದ ವೆತ್ತಿಯಂಗುಡಿಯಲ್ಲಿರುವ 52 ವರ್ಷದ ಆರಾಯಿ ಹಾಗೂ 56 ವರ್ಷದ ಆನಂದನ್ ದಂಪತಿಗೆ 9 ಮಕ್ಕಳು. ಆರಾಯಿ 13 ವರ್ಷದ ಹಿಂದೆಯೇ 9 ಮಕ್ಕಳಿಗೂ ಜನ್ಮ ನೀಡಿದ್ದರು. ಆದರೆ ಕಳೆದ ಕೆಲ ದಿನಗಳ ಹಿಂದೆ ಆಕೆಗೆ ಸುಸ್ತಾಗಿದ್ದರಿಂದ ಆಕೆಯನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ಸೇರಿಸಿದ್ದರು. ಈ ವೇಳೆ ಆಕೆ ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ವಯೋಸಹಜವಾಗಿ ಮುಟ್ಟುನಿಂತಿದೆ ಅಂದುಕೊಂಡಿದ್ದ ಆಕೆಗೆ ತಾನು ಗರ್ಭಿಣಿ ಎಂದು ಗೊತ್ತೇ ಇರಲಿಲ್ಲ.

PREGNANT

ಆದರೆ ಮೊನ್ನೆ ಸುಸ್ತು ಕಾಣಿಸಿಕೊಂಡು ಸಿಂಗವನಂನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಾಗ ಗರ್ಭಿಣಿಯಾಗಿದ್ದು ಗೊತ್ತಾಗಿದೆ. ಹೀಗಾಗಿ ವೈದ್ಯರು ಆಕೆಯನ್ನು ತಕ್ಷಣ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಕೊಳ್ಳಲು ಸೂಚಿಸಿದ್ದಾರೆ. ಅಲ್ಲದೆ ಹೆರಿಗೆ ಬಳಿಕ ಸಂತಾನ ನಿಯಂತ್ರಣ ಸರ್ಜರಿ ಬಗ್ಗೆಯೂ ಹೇಳಿದ್ದಾರೆ. ಆದರೆ ಯಾವಾಗ ವೈದ್ಯರಿಂದ ಈ ಸೂಚನೆ ಬಂತೋ ಕುಟುಂಬ ಸದಸ್ಯರೆಲ್ಲಾ ಹೇಳದೇ ಕೇಳದೇ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾರೆ.

9 ಹೆರಿಗೆಯೂ ಮನೆಯಲ್ಲೇ ಆಗಿತ್ತು!
ಆರಾಯಿ ದಂಪತಿಯ 9 ಮಕ್ಕಳ ಹೆರಿಗೆಯೂ ಮನೆಯಲ್ಲೇ ಆಗಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ವೆತ್ತಿಯಾಂಗುಡಿಯಲ್ಲಿ ಕಳೆದ 5 ವರ್ಷದಿಂದ ಇವರು ವಾಸ ಮಾಡುತ್ತಿದ್ದಾರೆ. ಈ ಕುಟುಂಬ ಒಂದೇ ಕಡೆ ಹೆಚ್ಚು ವರ್ಷಗಳ ಕಾಲ ಇರಲೇ ಇಲ್ಲ. ಆರಾಯಿಯ ನಾಲ್ವರು ಮಕ್ಕಳಿಗೆ ಮದುವೆಯಾಗಿ ಅವರ ಕುಟುಂಬದ ಜೊತೆ ಬಾಳುತ್ತಿರುವ ಹೊತ್ತಲ್ಲೇ ಆರಾಯಿ ಮತ್ತೆ ಗರ್ಭ ಧರಿಸಿದ್ದಾರೆ. ಆದರೆ ತಾನು ಗರ್ಭಿಣಿಯಾಗಿದ್ದೇನೆ ಎಂದು ಆಕೆಗೆ ಗೊತ್ತಿರಲೇ ಇಲ್ಲ.

PREGNANT 1

ಆಗಸ್ಟ್ 18ರಂದು ಆಕೆಯ 10ನೇ ಮಗುವಿನ ಹೆರಿಗೆಗೆ ಡೇಟ್ ಹೇಳಿದ್ದು, ಎಲ್ಲಾ ಮಕ್ಕಳನ್ನು ಮನೆಯಲ್ಲೇ ಹೆತ್ತಿದ್ದರಿಂದ ಆಕೆ ಆಸ್ಪತ್ರೆಯಿಂದ ನಾಪತ್ತೆಯಾಗಿರಬೇಕು. ಅಲ್ಲದೇ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಸಂತಾನ ನಿಯಂತ್ರಣ ಸರ್ಜರಿ ಬಗ್ಗೆ ಹೇಳಿದ್ದರಿಂದ ಆಕೆ ನಾಪತ್ತೆಯಾಗಿರಬೇಕು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. 4 ತಿಂಗಳ ಹಿಂದೆ ಆರಾಯಿ ಆಸ್ಪತ್ರೆಗೆ ಬಂದಿದ್ದಾಗ ಆಕೆಯಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಇರುವ ವಿಚಾರ ಬೆಳಕಿಗೆ ಬಂದಿತ್ತು. ಇದಾದ ಬಳಿಕ ಆಕೆಯನ್ನು ಪುದುಕೋಟೈ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಎರಡು ಯೂನಿಟ್ ರಕ್ತವನ್ನು ನೀಡಲಾಗಿತ್ತು. ಇದಾದ ಬಳಿಕ ಆಕೆ ಅಸ್ಪತ್ರೆಗೆ ಬಂದಿರಲಿಲ್ಲ ಎಂದು ಸಿಂಗಾವನಂ ಆಸ್ಪತ್ರೆಯ ಮೆಡಿಕಲ್ ಅಧಿಕಾರಿ ಎಂ.ಅಯ್ಯಪ್ಪನ್ ಹೇಳಿದ್ದಾರೆ.

ಇದಾದ ಬಳಿಕ ಇಲ್ಲಿಂದ ಹೊರಟ ಆಕೆ ಕಳೆದ 10 ದಿನಗಳವರೆಗೆ ಆಸ್ಪತ್ರೆಗೆ ಬಂದಿರಲಿಲ್ಲ. ನಮ್ಮ ಆಸ್ಪತ್ರೆಗೆ ಬಂದಾಗ ಆಕೆಗೆ ಹೈ ಬಿಪಿ ಇತ್ತು. ಹೀಗಾಗಿ ಅವರನ್ನು ಪುದುಕೋಟೈ ಆಸ್ಪತ್ರೆಗೆ ದಾಖಲಿಸಲು ಹೇಳಿದ್ದೆವು. ಆದರೆ ಈ ಸೂಚನೆ ನೀಡಿದ ಬೆನ್ನಲ್ಲೇ ಆಕೆ ಇಲ್ಲಿಂದ ನಾಪತ್ತೆಯಾಗಿದ್ದಾರೆ ಎಂದು ಅಯ್ಯಪ್ಪನ್ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

TAMILNADU

Share This Article
Leave a Comment

Leave a Reply

Your email address will not be published. Required fields are marked *