ತುಂಬು ಗರ್ಭಿಣಿ ವೈದ್ಯೆಯಿಂದ ಜನರ ಸೇವೆ – ಪ್ರತಿದಿನ ಆರೋಗ್ಯ ಕೇಂದ್ರಕ್ಕೆ 30 ಕಿ.ಮೀ. ಪ್ರಯಾಣ

Public TV
2 Min Read
doctor6

– ಗ್ರಾಮಗಳ ಮನೆಗೆ ಹೋಗಿ ರೋಗಿಗಳ ತಪಾಸಣೆ
– ಲಾಕ್‍ಡೌನ್ ವೇಳೆ ಜನರ ಸೇವೆಯೇ ಮುಖ್ಯ

ಹೈದರಾಬಾದ್: ಕೊರೊನಾ ನಡುವೆಯೂ ಐಎಎಸ್ ಅಧಿಕಾರಿಯೊಬ್ಬರು ತಮ್ಮ ಒಂದು ತಿಂಗಳ ಮಗುವನ್ನು ಕೈಯಲ್ಲಿ ಎತ್ತಿಕೊಂಡೇ ಕೆಲಸಕ್ಕೆ ಹಾಜರಾಗಿದ್ದರು. ಇದೀಗ ಎಂಟು ತಿಂಗಳ ಗರ್ಭಿಣಿಯೊಬ್ಬರು ಮನೆಯಲ್ಲಿ ವಿಶ್ರಾಂತಿ ಪಡೆಯುವ ಬದಲು ಪ್ರತಿದಿನ 30 ಕಿಲೋ ಮೀಟರ್ ಪ್ರಯಾಣಿಸಿ ಹಳ್ಳಗಳಿಂದ ಬರುವ ರೋಗಿಗಳ ಸೇವೆ ಮಾಡುತ್ತಿದ್ದಾರೆ.

ಡಾ. ಜಾನ್ಸಿ (33) 8 ತಿಂಗಳ ಗರ್ಭಿಣಿಯಾಗಿದ್ದರೂ ಜನರ ಸೇವೆ ಮಾಡುತ್ತಿದ್ದಾರೆ. ಇವರು ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ ದೇವಪಲ್ಲಿ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಪ್ರತಿದಿನ ಸುಮಾರು 30 ಕಿ.ಮೀ ಪ್ರಯಾಣಿಸುತ್ತಾರೆ. ಅಲ್ಲಿ ಬರುವ ಸುತ್ತಮುತ್ತಲ 30 ಹಳ್ಳಿಗಳಿಂದ ಬರುವ ರೋಗಿಗಳಿಗೆ ಆರೋಗ್ಯ ಸೇವೆ ನೀಡುತ್ತಿದ್ದಾರೆ. ದೇವಪಲ್ಲಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯಾವುದೇ ಖಾಸಗಿ ಆರೋಗ್ಯ ಕೇಂದ್ರ ಇಲ್ಲ. ಹೀಗಾಗಿ ಇಲ್ಲಿನ ಸುತ್ತಮುತ್ತಲಿನ ಜನರು ಈ ಆರೋಗ್ಯ ಕೇಂದ್ರವನ್ನೇ ಅವಲಂಬಿಸಿದ್ದಾರೆ.

Corona Virus 6

ನಾನು ಕಳೆದ ಒಂದೂವರೆ ವರ್ಷದಿಂದ ಈ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿನ ಗ್ರಾಮಸ್ಥರು ಈ ಆರೋಗ್ಯ ಸೇವೆಗೆ ನಮ್ಮನ್ನು ನಂಬಿಕೊಂಡು ಬರುತ್ತಾರೆ. ಈ ಕೊರೊನಾ ಸೋಂಕು ಮತ್ತು ಲಾಕ್‍ಡೌನ್ ಮಧ್ಯೆ ಜನರ ಸೇವೆ ಮಾಡುವುದು ಮುಖ್ಯ ಎಂದು ಭಾವಿಸಿ ಆಸ್ಪತ್ರೆಗೆ ಬರುತ್ತಿದ್ದೇನೆ ಎಂದು ಡಾ.ಜಾನ್ಸಿ ಹೇಳಿದ್ದಾರೆ.

ಲಾಕ್‍ಡೌನ್‍ನಿಂದಾಗಿ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಸಂಚಾರ ಮಾಡುವುದು ಕಷ್ಟವಾಗಿದೆ. ಆದರೂ ಡಾ.ಜಾನ್ಸಿ ಬುಡಕಟ್ಟು ಗ್ರಾಮಗಳ ಮನೆ ಮನೆಗೆ ಹೋಗಿ ರೋಗಿಗಳ ತಪಾಸಣೆ ಮಾಡುತ್ತಿದ್ದಾರೆ. ಅದರಲ್ಲೂ ಗರ್ಭಿಣಿಯರು ಮತ್ತು ಕೊರೊನಾ ವೈರಸ್ ಪ್ರಕರಣಗಳನ್ನು ಪರೀಕ್ಷೆ ಮಾಡುತ್ತಾರೆ. ಈ ಗ್ರಾಮಗಳಲ್ಲಿ ವಿದೇಶಗಳಿಂದ ಬಂದವರು ಕೂಡ ಇದ್ದು, ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೇ ಕೊರೋನಾ ಸೋಂಕು ಲಕ್ಷಣ ಹೊಂದಿರುವ 10 ರೋಗಿಗಳಿಗೆ ಡಾ.ಜಾನ್ಸಿ ಚಿಕಿತ್ಸೆ ನೀಡುತ್ತಿದ್ದಾರೆ.

diabetes

ನಾವು ಕಳೆದ 10 ದಿನಗಳಲ್ಲಿ ಸುಮಾರು 10 ಗರ್ಭಿಣಿಯರನ್ನು ಹೆರಿಗೆಗಾಗಿ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಿದ್ದೇನೆ. ಹೆರಿಗೆಯ ಹೊರತಾಗಿ, ಬಿಪಿ, ಮಧುಮೇಹ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿರುವ ಜನರು ಕೂಡ ಇಲ್ಲಿಗೆ ಬರುತ್ತಾರೆ. ನಾನು ಸರ್ಕಾರವು ನೀಡುವ ಮಾಸ್ಕ್, ಮತ್ತು ಗ್ಲೌಸ್‍ಗಳನ್ನು ಬಳಸುತ್ತೇನೆ. ಅದೇ ರೀತಿ ಸ್ಯಾನಿಟೈಸರ್ ಹಾಕಿಕೊಂಡ ಕೈ ಸ್ವಚ್ಛ ಮಾಡಿಕೊಳ್ಳುತ್ತೇನೆ. ಎಂದು ಡಾ.ಜಾನ್ಸಿ ತಿಳಿಸಿದ್ದಾರೆ.

ಡಾ. ಜಾನ್ಸಿ ಮಾತೃತ್ವ ರಜೆ ತೆಗೆದುಕೊಳ್ಳುವ ಅವಕಾಶವಿದೆ. ಆದರೆ ಕೊರೊನಾದಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಮನೆಯಲ್ಲಿ ಸುಮ್ಮನೇ ಕೂರುವ ಬದಲು ಜನರ ಸೇವೆ ಮಾಡುವುದು ಉತ್ತಮ ಎಂದು ಆರೋಗ್ಯ ಕೇಂದ್ರಕ್ಕೆ ಬರುತ್ತಿದ್ದಾರೆ.

corona lockdown 660 300320123756

ನನ್ನ ಕೆಲಸಕ್ಕೆ ಕುಟುಂಬದವರ ಬೆಂಬಲವಿದೆ. ಪತಿ ಡಾ.ಪ್ರಸಾಂತ್ ಕೂಡ ವೈದ್ಯರಾಗಿದ್ದು, ಜಿಲ್ಲೆಯ ನೆಲ್ಲಿಮೆರ್ಲಾದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯನ್ನು ಚಿಕಿತ್ಸೆ ನೀಡುವ ವೈದ್ಯರು ದೇವರು ಎಂದು ಜನರು ಭಾವಿಸುತ್ತಾರೆ. ಹೀಗಾಗಿ ಅವರ ಸೇವೆ ಮಾಡುವುದೇ ನಮಗೆ ಮುಖ್ಯ ಎಂದು ಹೇಳಿದರು. ದೇವಪಲ್ಲಿಗಿಂತ ಮೊದಲು ಗೋದಾವರಿ ಜಿಲ್ಲೆಯ ರಾಮಚೋದವರಂನ ಬುಡಕಟ್ಟು ಪ್ರದೇಶದಲ್ಲಿ ಆರು ವರ್ಷಗಳ ಕಾಲ ಆರೋಗ್ಯ ಕೆಂದ್ರದಲ್ಲಿ ಕೆಲಸ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *