ಮಂಡ್ಯ: ಬೇಕರಿಯಲ್ಲಿ ಖರೀದಿಸಿದ ತಿನಿಸು ತಿಂದು ಗರ್ಭಿಣಿ ಸೇರಿದಂತೆ 9 ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಲ್ಲಿ ನಡೆದಿದೆ.
ಕೆಆರ್ ಪೇಟೆ ಪಟ್ಟಣದ ಬೇಕರಿಯೊಂದರಲ್ಲಿ ವಿವಿಧ ಗ್ರಾಮಗಳ ಜನ ಕೇಕ್ ಖರೀದಿಸಿ ಮನೆಗೆ ತೆಗೆದುಕೊಂಡು ಹೋಗಿದ್ದರು. ಕೇಕ್ ತಿಂದ ನಂತರ ಗರ್ಭಿಣಿ ಸೇರಿದಂತೆ 9 ಮಕ್ಕಳು ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದಾರೆ.
ಗುರುವಾರ ಸಂಜೆ 6 ಗಂಟೆಯಿಂದ ಒಬ್ಬರಾದ ಮೇಲೆ ಒಬ್ಬರಂತೆ ರಾತ್ರಿ 11 ಗಂಟೆವರೆಗೂ ಅಸ್ವಸ್ಥಗೊಂಡಿದ್ದು, ಕೂಡಲೇ ಅವರನ್ನು ಕೆಆರ್ ಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಏಳು ಮಕ್ಕಳನ್ನು ಮುಂಜಾಗ್ರತಾ ಕ್ರಮವಾಗಿ ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಎಲ್ಲರ ಆರೋಗ್ಯದಲ್ಲೂ ಚೇತರಿಕೆ ಕಂಡುಬಂದಿದ್ದು, ಈ ಪ್ರಕರಣದಿಂದಾಗಿ ಪೋಷಕರಲ್ಲಿ ಆತಂಕ ಮೂಡಿದೆ. ಘಟನೆ ನಡೆದ ತಕ್ಷಣ ಬೇಕರಿಗೆ ದೌಡಾಯಿಸಿದ ಅಧಿಕಾರಿಗಳು ಅನಾರೋಗ್ಯಕ್ಕೆ ಕಾರಣವಾದ ಕೇಕ್ ವಶಪಡಿಸಿಕೊಂಡು ತನಿಖೆ ನಡೆಸಿದ್ದಾರೆ.