ಬೆಂಗಳೂರು: ಬೆಂಗಳೂರು ಮತ್ತು ಸುತ್ತಮುತ್ತ ಪ್ರದೇಶದಲ್ಲಿ ಮಳೆರಾಯನ ಅಬ್ಬರ ಜೋರಾಗಿದೆ. ಬೆಂಗಳೂರಿನ ಹಲವೆಡೆ ಭರ್ಜರಿ ಮಳೆಯಾಗಿದ್ದು, ಎಲೆಕ್ಟ್ರಾನಿಕ್ ಸಿಟಿಯ ರಸ್ತೆ ಸಂಪೂರ್ಣ ನದಿಯಂತಾಗಿತ್ತು. ಕೋಲಾರ, ದೇವನಹಳ್ಳಿ, ಆನೇಕಲ್, ನೆಲಮಂಗಲ, ತುಮಕೂರುಗಳಲ್ಲಿ ಗಂಟೆಗಟ್ಟಲೆ ಬಿರುಗಾಳಿ ಮಳೆಯಾಗಿದೆ. ಎಂದಿನಂತೆ ಮರಗಳು, ವಿದ್ಯುತ್ ಕಂಬಗಳು ಧರೆಗೆ ಉರುಳಿವೆ.
ಮುಂಗಾರು ಪ್ರವೇಶದ ಕುರಿತು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ನಿರ್ದೇಶಕರದ ಶ್ರೀನಿವಾಸ್ ರೆಡ್ಡಿ ಅವರು, ಕೇರಳ ಕರಾವಳಿ ಭಾಗಕ್ಕೆ ಮೇ 29 ಕ್ಕೆ ಮುಂಗಾರು ಪ್ರವೇಶ ಪಡೆಯುವ ಸಾಧ್ಯತೆ ಇದ್ದು, ರಾಜ್ಯಕ್ಕೆ ಈ ಭಾರಿ ಮುಂಗಾರು ಸ್ವಲ್ಪ ಬೇಗನೇ ಪ್ರವೇಶ ನೀಡಲಿದೆ. ಮೇ 30 ಅಥವಾ ಜೂನ್ 1ರ ವೇಳೆಗೆ ಮುಂಗಾರು ಅಗಮನವಾಗುವ ಅವಕಾಶವಿದ್ದು, ಮೇ 30 ಕ್ಕೆ ರಾಜ್ಯದ ಕರವಾಳಿ ಹಾಗೂ ದಕ್ಷಿಣ ಒಳನಾಡಗೆ ವ್ಯಾಪಿಸುವ ಸಾಧ್ಯತೆ ಎಂದು ತಿಳಿಸಿದ್ದಾರೆ.
ಅರಬ್ಬೀ ಸುಮುದ್ರದಿಂದ ನೈರುತ್ಯ ಮುಂಗಾರು ಭಾಗದಲ್ಲಿ ಮಳೆಯ ಮಾರುತಗಳ ವೇಗ ಹೆಚ್ಚಾಗಿರುವುದರಿಂದ ರಾಜ್ಯಕ್ಕೆ ಮುಂಗಾರು ನಿಗಧಿತ ಸಮಯಕ್ಕಿಂತ ಬೇಗ ಬರುವ ಸಾಧ್ಯತೆ ಇದೆ. ಅಲ್ಲದೇ ಈ ಭಾರಿ ರಾಜ್ಯಕ್ಕೆ ವಾಡಿಕೆಯಂತೆ ಮಳೆ ನಿರೀಕ್ಷಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನು ಸಂಜೆ ಸುರಿದ ನಗರದ ಹೊರವಲಯದ ನೆಲಮಂಗಲದ ಸುರಿದ ಆಲಿಕಲ್ಲು ಬಿರುಗಾಳಿ ಸಹಿತ ಭಾರಿ ಮಳೆಗೆ, ಬೃಹತ್ ಗಾತ್ರದ ಮರಗಳು ಧರೆಗುರುಳಿದೆ. ನೆಲಮಂಗಲದ ಹಲವೆಡೆ ಸಂಜೆ 4 ಗಂಟೆಯಿಂದಲೂ, ಗುಡುಗು ಸಿಡಿಲು ಬಿರುಗಾಳಿ ಆಲಿಕಲ್ಲು ಸಹಿತ ಮಳೆಯಾಗಿದೆ. ಬೆಂಗಳೂರು ತುಮಕೂರು ರಾಷ್ಟ್ರೀಯ ಹೆದ್ದಾರಿ 4ರ ಹನುಮಂತಪುರದ ಪ್ರಿನ್ಸ್ ಹೋಟೆಲ್ ಬಳಿ ಬೃಹಧಾಕಾರದ ನೀಲಗಿರಿ ಮರವೊಂದು ಹೆದ್ದಾರಿ ರಸ್ತೆ ಬದಿಯಲ್ಲಿ ನಿಲ್ಲಿಸಿದ ಲಾರಿ ಮೇಲೆ ಬಿದ್ದಿದೆ. ಈ ವೇಳೆ ವಾಹನದಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ.
ಹೆದ್ದಾರಿಗೆ ಮರ ಬಿದ್ದಿದ್ದರಿಂದ ಸಂಚಾರ ದಟ್ಟಣೆ ಹೆಚ್ಚಾಗಿತ್ತು, ಸ್ಥಳಕ್ಕೆ ಡಾಬಸ್ಪೇಟೆ ಪೊಲೀಸರ ಎರಡು ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಇತ್ತ ತಾಲೂಕಿನ ದಕ್ಷಿಣಕಾಶಿ ಶಿವಗಂಗೆಯಲ್ಲೂ ಸಹ ಭಾರಿ ಮಳೆಯಾಗಿದ್ದು, ಬಿರುಗಾಳಿಯ ರಭಸಕ್ಕೆ ಪುರಾತನವಾದ ಬೃಹತ್ ಮರವೊಂದು ಉರುಳಿಬಿದ್ದಿದೆ. ರಸ್ತೆ ಬದಿಯ ಅಂಗಡಿ ಮಳಿಗೆ ಸೇರಿದಂತೆ ಹೋಟೆಲ್ ಹಾಗೂ ಮನೆಗಳ ಮೇಲೆ ಮರ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಘಟನೆಯಿಂದ ಜನರು ಪಾರಾಗಿದ್ದಾರೆ. ಸ್ಥಳೀಯ ಜನರು ತೆರವು ಕಾರ್ಯದಲ್ಲಿ ನಿರತರಾಗಿದ್ದಾರೆ. ಮನೆ ಹಾಗೂ ಮಳಿಗೆಗಳನ್ನ ಕಳೆದುಕೊಂಡ ಕುಟುಂಬಗಳು ಆತಂಕಕ್ಕೆ ಒಳಗಾಗಿದ್ದಾರೆ.