ಬೆಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆಯ ಬಳಿಕ ದೇಶದಲ್ಲಿ ಅಪರೂಪ ಎಂಬಂತೆ ಕರಾವಳಿಯ ಬಿಜೆಪಿ ಕಾರ್ಯಕರ್ತರು ರೊಚ್ಚಿಗೆದ್ದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆಯಿಂದ ಹೈಕಮಾಂಡ್ ವಿಚಲಿತಗೊಂಡಿದೆ.
ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆಯ ಬಳಿಕ ಬೆಳ್ಳಾರೆಗೆ ಅಂತಿಮ ದರ್ಶನಕ್ಕೆ ತೆರಳಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಚಿವರಾದ ಸುನಿಲ್ ಕುಮಾರ್, ಎಸ್. ಅಂಗಾರ ಸೇರಿದಂತೆ ಇತರ ಸಚಿವರಿಗೆ ಘೇರಾವ್, ಕಾರನ್ನೇ ಪಲ್ಟಿ ಹಾಕುವಷ್ಟರ ಮಟ್ಟಿಗೆ ಕಾರ್ಯಕರ್ತರ ಆಕ್ರೋಶದ ಬಗ್ಗೆ ರಾಜ್ಯ ಬಿಜೆಪಿ ಘಟಕದಿಂದ ವೀಡಿಯೋ ಸಮೇತ ಹೈಕಮಾಂಡ್ ವರದಿ ತರಿಸಿಕೊಂಡಿದೆ. ಇದೇ ವೇಳೆ ಕರಾವಳಿ ಭಾಗದ ಹಾಲಿ ಬಿಜೆಪಿ ಶಾಸಕರು, ಸಚಿವರು, ಬಿಜೆಪಿ ನಾಯಕರ ಟ್ರ್ಯಾಕ್ ರೆಕಾರ್ಡ್ ಕೂಡ ಬಿಜೆಪಿ ಹೈಕಮಾಂಡ್ ತರಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಆರಗ ಜ್ಞಾನೇಂದ್ರರನ್ನು ಕಿತ್ತುಹಾಕದೆ ಇದ್ದರೆ ರಾಜ್ಯದಲ್ಲಿ ಜನ ಮನೆಯಿಂದ ಹೊರಗೆ ಬರುವುದೂ ಕಷ್ಟ: ಸಿದ್ದರಾಮಯ್ಯ
ಇನ್ನೊಂದೆಡೆ ದಕ್ಷಿಣ ಕನ್ನಡ ಸೇರಿದಂತೆ ರಾಜ್ಯಾದ್ಯಂತ ಪ್ರವೀಣ್ ಹತ್ಯೆ ಖಂಡಿಸಿ ರಾಜೀನಾಮೆ ಪರ್ವ ಮುಂದುವರಿದಿದೆ. ಇದುವರೆಗೆ 300ಕ್ಕೂ ಹೆಚ್ಚು ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆ. ಪಕ್ಷದ ನಾಯಕರ ವಿರುದ್ಧ ಕಾರ್ಯಕರ್ತರ ಅಸಮಾಧಾನ ಮುಂದುವರಿದಿದೆ. ಅಂದು ಬಿಜೆಪಿ ಪಕ್ಷಕ್ಕೆ ಜೈಕಾರ ಹಾಕುತ್ತಿದ್ದ ಬಿಜೆಪಿ ಕಾರ್ಯಕರ್ತರು ಇಂದು ಪಕ್ಷದ ವಿರುದ್ಧವೇ ಧಿಕ್ಕಾರ ಕೂಗುವಂತಾ ಪರಿಸ್ಥಿತಿ ಕರ್ನಾಟಕದಲ್ಲಿ ನಿರ್ಮಾಣವಾಗಿದೆ. ಇದನ್ನೂ ಓದಿ: ಪ್ರವೀಣ್ ಹತ್ಯೆ ಕೇಸ್ – ತಪ್ಪು ಮಾಹಿತಿಯಿಂದ ನಡೀತಾ ಕೊಲೆ?
ಬಿಜೆಪಿಯಲ್ಲಿ ಪಕ್ಷದ ನಾಯಕರ ಧೋರಣೆಗೆ ಬೇಸತ್ತು ಹೋದ ಕಾರ್ಯಕರ್ತರು ಸಾಕು ಈ ಬಾರಿ ತಳಮಟ್ಟದ ಕಾರ್ಯಕರ್ತರಿಗೆ ಟಿಕೆಟ್ ಕೊಡಿ. ನಾವು ಬಿಜೆಪಿ ಇಮೇಜ್ ಬದಲಾಯಿಸುತ್ತೇವೆ. ನಿಮ್ಮ ಮೇಲೆ ಈಗ ನಂಬಿಕೆ ನಿಧಾನವಾಗಿ ಕರಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಭದ್ರ ಕೋಟೆಯಾಗಿ ಗುರುತಿಸಿಕೊಂಡಿದ್ದ ಕರಾವಳಿಯಲ್ಲಿ ಕಾರ್ಯಕರ್ತರೇ ಬಿಜೆಪಿ ನಾಯಕರ ವಿರುದ್ಧ ಕೆಂಡಕಾರಿದ್ದಾರೆ. ಕರಾವಳಿಯ ಕೇಸರಿ ಯುವ ಪಡೆಯ ಆಕ್ರೋಶದ ಕಿಚ್ಚು ಸದ್ದು ಮಾಡುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಬಿಜೆಪಿಗೆ ಇದು ಹೊಡೆತ ಬೀಳುವ ಸಾಧ್ಯತೆ ಇದೆ. ಜೊತೆಗೆ ಚುನಾವಣೆ ಹತ್ತಿರದಲ್ಲಿರುವುದರಿಂದ ಈ ಬಗ್ಗೆ ಹೈಕಮಾಂಡ್ ಗಂಭೀರವಾಗಿ ಚಿಂತನೆ ನಡೆಸಿದೆ.