ಮಂಗಳೂರು: ಕರಾವಳಿಯನ್ನೇ ಬೆಚ್ಚಿಬೀಳಿಸಿದ್ದ ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಬಂಧಿತ ಆರೋಪಿಗಳು ಹತ್ಯೆಗೆ ನಡೆದಿದ್ದ ಪ್ಲಾನ್ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
ಶಫೀಕ್ ಮತ್ತು ಝಾಕೀರ್ ಇಬ್ಬರು ಬಂಧಿತರು. ಹತ್ಯೆಗೆ ನಿಜವಾದ ಕಾರಣರಾದ ಹಂತಕರ ಬಂಧನವಾಗಿಲ್ಲ. ಹಂತಕರಿಗಾಗಿ ಪೊಲೀಸರ ತಂಡ ರಚಿಸಿದ್ದು. ಐಪಿಎಸ್ ಅಧಿಕಾರಿ ನೇತೃತ್ವದ ತಂಡ ಕೇರಳದಲ್ಲಿ ಬೀಡುಬಿಟ್ಟಿದೆ. ಮಾಹಿತಿಯ ಪ್ರಕಾರ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಶಫೀಕ್ ಮಾಹಿತಿ ಆಧರಿಸಿ ಕೇರಳದ ಗ್ರಾಮವೊಂದರಲ್ಲಿ ಇಬ್ಬರು ಶಂಕಿತರ ವಶಕ್ಕೆ ಪಡೆಯಲಾಗಿದೆ. ಇವರೇ ಆ ಹಂತಕರು ಎನ್ನುವುದು ಸ್ಪಷ್ಟವಾಗಬೇಕಿದೆ. ಸದ್ಯ ಬಂಧಿತ ಶಫೀಕ್ ಮತ್ತು ಝಾಕೀರ್ ಹತ್ಯೆಗೆ ಸಹಾಯ ಮಾಡಿದವರಾಗಿದ್ದು, ಹಂತಕರು ತಪ್ಪಿಸಿಕೊಳ್ಳಲು ದಾರಿ ತೋರಿಸಿದವರಾಗಿದ್ದಾರೆ. ವಿಚಾರಣೆ ವೇಳೆ ಇದನ್ನು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಪ್ರವೀಣ್ ಹತ್ಯೆಗೆ ರಾಜಸ್ಥಾನ ಸಿಎಂ ಖಂಡನೆ
ಇಬ್ಬರಿಗೂ ಆಗಸ್ಟ್ 11ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಗತ್ಯವಿದ್ದರೆ ಅವರನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ. ಈ ನಡುವೆ ಸಿಸಿಟಿವಿ ದೃಶ್ಯವೊಂದು ಸಿಕ್ಕಿದ್ದು ಅದರಿಂದ ಭಯಾನಕ ಸತ್ಯ ಹೊರಬಿದ್ದಿದೆ. ಆರೋಪಿಗಳಲ್ಲಿ ಒಬ್ಬನಾದ ಶಫೀಕ್ ವ್ಯಕ್ತಿಯೊಬ್ಬನನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಬಂದು ಬೆಳ್ಳಾರೆಯ ಕೋಳಿ ವ್ಯಾಪಾರಿ ಪೃಥ್ವಿರಾಜ್ನನ್ನು ದೂರದಿಂದಲೇ ತೋರಿಸಿ ಹೋಗಿದ್ದಾನೆ. ಆದರೆ, ಪೃಥ್ವಿರಾಜ್ ಬದಲಿಗೆ ಪ್ರವೀಣ್ ಹತ್ಯೆ ಆಗಿದ್ದು, ಪ್ರವೀಣ್ ಹತ್ಯೆ ಹಿಂದೆ ಯಾರ ಕೈವಾಡವಿದೆ? ಪೃಥ್ವಿರಾಜ್ನನ್ನು ಕೊಲೆ ಮಾಡಲು ಬಂದು ಪ್ರವೀಣ್ನ ಕಥೆ ಮುಗಿಸಿದ್ರಾ? ತಪ್ಪು ಮಾಹಿತಿಯಿಂದ ಈ ಕೊಲೆ ನಡೀತಾ? ಹೀಗೆ ಸಾಲು, ಸಾಲು ಪ್ರಶ್ನೆಗಳು ಎದುರಾಗಿದೆ. ಈ ಎಲ್ಲ ಆಯಾಮಗಳಲ್ಲೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಪ್ರವೀಣ್ ಕುಟುಂಬಕ್ಕೆ 50 ಲಕ್ಷ ಪರಿಹಾರ ವಿತರಣೆ