ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಪರವಾಗಿ ನಟ ಶಿವರಾಜ್ ಕುಮಾರ್ (Shivaraj Kumar) ಪ್ರಚಾರ ಮಾಡಿದರು ಎನ್ನುವ ಕಾರಣಕ್ಕಾಗಿ ಶಿವಣ್ಣನಿಗೆ ನಿನ್ನೆ ಟಾಂಗ್ ಕೊಟ್ಟಿದ್ದರು ಸಂಸದ ಪ್ರತಾಪ್ ಸಿಂಹ. ಈ ವಿಷಯದಲ್ಲಿ ಪುನೀತ್ ರಾಜ್ ಕುಮಾರ್ ಹೆಸರನ್ನು ಅವರು ಎಳೆತಂದಿದ್ದರು. ಸಿಂಹ ನಡೆಗೆ ಅಪ್ಪು ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದರು. ಈ ಕುರಿತಂತೆ ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಪರೋಕ್ಷವಾಗಿಯೇ ಅಸಮಾಧಾನ ಹೊರಹಾಕಿದ ಶಿವಣ್ಣ, ‘ಪ್ರತಾಪ್ ಸಿಂಹ ಮತ್ತು ಸೋಮಣ್ಣ ಇಬ್ಬರೂ ನನ್ನ ಆತ್ಮೀಯರು. ಹಾಗೆ ಹೇಳಬಾರದಿತ್ತು. ಅಲ್ಲದೇ, ಸೋಮಣ್ಣ ವರುಣಾ (Varuna) ಕ್ಷೇತ್ರದಲ್ಲಿ ಸ್ಪರ್ಧಿಸಿರುವುದು ನನಗೆ ಗೊತ್ತೇ ಇರಲಿಲ್ಲ’ ಎಂದಿದ್ದಾರೆ.
ವರುಣಾ ಕ್ಷೇತ್ರದಲ್ಲಿ ನಿನ್ನೆ ಶಿವಣ್ಣ ಪ್ರಚಾರದಲ್ಲಿ ತೊಡಗಿದ್ದರ ಕುರಿತು ಪ್ರತಾಪ್ ಸಿಂಹ (Pratap Simha) ಟ್ವೀಟ್ ಮಾಡಿ, ‘ಪುನೀತ್ ರಾಜ್ ಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ. ಮನೆಮೆಚ್ಚಿ ಶ್ಲಾಘಿಸಿದ ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕೆ ಇಳಿದ ಶಿವಣ್ಣ. ಅವರವರ ಭಾವ ಭಕುತಿಗೆ’ ಎಂದು ಟ್ವಿಟರ್ ನಲ್ಲಿ ಬರೆದಿದ್ದರು. ಇದನ್ನೂ ಓದಿ:‘ಶಾಕುಂತಲಂ’ ಸಿನಿಮಾ ಸೋಲೊಪ್ಪಿಕೊಂಡ ನಿರ್ಮಾಪಕ ದಿಲ್ ರಾಜು
ಕಳೆದ ಮೂರು ದಿನಗಳಿಂದ ಶಿವರಾಜ್ ಕುಮಾರ್ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಮಧು ಬಂಗಾರಪ್ಪ ಪರವಾಗಿ ಸೊರಬದಲ್ಲಿ ಮತಯಾಚನೆ ಮಾಡಿದ್ದಾರೆ. ರಮ್ಯಾ, ನಿಶ್ವಿಕಾ ನಾಯ್ಡು, ದುನಿಯಾ ವಿಜಯ್ ಸೇರಿದಂತೆ ಹಲವರು ಸಿದ್ದರಾಮಯ್ಯನವರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.
ಈ ಬಾರಿ ಸ್ಯಾಂಡಲ್ ವುಡ್ ಅನೇಕ ಕಲಾವಿದರು ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಸುದೀಪ್ ಹತ್ತಾರು ಕ್ಷೇತ್ರಗಳಿಗೆ ಹೋಗಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದಾರೆ. ಹರ್ಷಿಕಾ ಪೂಣಚ್ಚ ಕೂಡ ಗದಗ ಮತ್ತು ದೊಡ್ಡಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದಾರೆ. ನೆನಪಿರಲಿ ಪ್ರೇಮ್ ಸೇರಿದಂತೆ ಹಲವರು ಪ್ರಚಾರ ಕಾರ್ಯದಲ್ಲಿದ್ದಾರೆ.