ನವದೆಹಲಿ: 70 ವರ್ಷದಿಂದ ದೇಶ ಅಭಿವೃದ್ಧಿಯಾಗಿಲ್ಲ, ಕಾಂಗ್ರೆಸ್ ನಲ್ಲಿ ಒಳ್ಳೆಯ ಮುಖ್ಯಮಂತ್ರಿ ಇರಲಿಲ್ಲ ಎಂದು ಹೇಳಿಲ್ಲ. ಹಿಂದೆ ಕಾಂಗ್ರೆಸ್ ನಲ್ಲಿದ್ದ ಹಲವು ನಾಯಕರು ಉತ್ತಮ ಕೆಲಸ ಮಾಡಿದ್ದಾರೆ. ಆದರೆ ಎಲ್ಲ ಅಭಿವೃದ್ಧಿಯನ್ನು ಒಂದು ಕುಟುಂಬಕ್ಕೆ ಸಮರ್ಪಣೆ ಮಾಡಿವುದು ತಪ್ಪು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ದಸರಾ ಉದ್ಘಾಟನೆಗೆ ಎಸ್.ಎಂ.ಕೃಷ್ಣ ಆಯ್ಕೆ ಹಿನ್ನಲೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಎಸ್.ಎಂ.ಕೃಷ್ಣ ಅವರು ಹಿಂದೆ ಮಾಡಿದ ಹಲವು ಪ್ರಮುಖ ಸಾಧನೆಗಳನ್ನು ವಿವರಿಸಿದರು. ಈ ವೇಳೆ ಕಾಂಗ್ರೆಸ್ ಅವಧಿಯಲ್ಲಿ ದೇಶ ಅಭಿವೃದ್ಧಿಯಾಗಿಲ್ಲ ಎಂದು ಹೇಳುತ್ತಿರಿ, ಎಸ್.ಎಂ.ಕೃಷ್ಣ ಕಾಂಗ್ರೆಸ್ ನಲ್ಲಿದ್ದು ಇಷ್ಟೆಲ್ಲ ಕೆಲಸ ಮಾಡಿದ್ದಾರಲ್ಲ ಎಂದು ಮರು ಪ್ರಶ್ನಿಸಿದ್ದಕ್ಕೆ ಉತ್ತರಿಸಿದರು. ಇದನ್ನೂ ಓದಿ: ದಸರಾ ಉದ್ಘಾಟನೆಗೆ ಎಸ್ಎಂಕೆ ಸರಿಯಾದ ಆಯ್ಕೆ – ಸಿಎಂಗೆ ಪ್ರತಾಪ್ ಸಿಂಹ ಅಭಿನಂದನೆ
ಕಾಂಗ್ರೆಸ್ ನ ಹಲವು ನಾಯಕರು ಉತ್ತಮ ಕೆಲಸ ಮಾಡಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿ, ಸರ್ದಾರ್ ವಲ್ಲಭ್ ಬಾಯ್ ಪಟೇಲ್, ವೀರೇಂದ್ರ ಪಾಟೀಲ್, ಪಿ.ವಿ.ನರಸಿಂಹರಾವ್ ಸೇರಿ ಹಲವು ನಾಯಕರನ್ನು ನಾವು ಎಂದೂ ಮರೆತಿಲ್ಲ, ಅವರಿಗೆ ಶ್ಲಾಘನೆ ವ್ಯಕ್ತಪಡಿಸುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಮಾತನಾಡುವಾಗ ಪ್ರತಿ ಬಾರಿ ಪ್ರಧಾನಿ ನರೇಂದ್ರ ಮೋದಿ ಬಸವಣ್ಣನವರನ್ನೂ ನೆನಪಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದರು. ಇದನ್ನೂ ಓದಿ: ದಸರಾ ಉದ್ಘಾಟನೆಯನ್ನು ರಾಜಕೀಕರಣಗೊಳಿಸುವುದು ಕೆಟ್ಟ ಸಂಪ್ರದಾಯ – ಆಪ್ ವಿರೋಧ
ಸ್ವಾತಂತ್ರ್ಯ, ಪ್ರಜಾಪ್ರಭುತ್ವ ತಂದುಕೊಟ್ಟಿದ್ದು ಕಾಂಗ್ರೆಸ್ ಅಲ್ಲ. ಆ ಹೋರಾಟಕ್ಕೆ ಸಾಕಷ್ಟು ಜನರ ಶ್ರಮ ಇದೆ. ನಾವು ಸುಭಾಷ್ ಚಂದ್ರ ಬೋಸ್, ವೀರ್ ಸಾರ್ವಕರ ಅವರನ್ನು ಪ್ರೀತಿಸುತ್ತೇವೆ. ಆದರೆ ಕಾಂಗ್ರೆಸ್ ಎಲ್ಲವೂ ನಾವೇ ಮಾಡಿದ್ದು ಎಂದು ಕೊಚ್ಚಿಕೊಳ್ಳುತ್ತದೆ. ಎಲ್ಲವನ್ನೂ ನೆಹರು ಕುಟುಂಬ ಮಾಡಿದೆ ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.