ಮೈಸೂರು: ಟಿಪ್ಪು ಎಕ್ಸ್ಪ್ರೆಸ್ ಬದಲು ಮೈಸೂರಿಗೆ ರೈಲು ಸಂಪರ್ಕ ತಂದ ಮಹಾರಾಜರ ಕೊಡುಗೆಯ ಪ್ರತೀಕವಾಗಿ ಒಡೆಯರ್ ಎಕ್ಸ್ಪ್ರೆಸ್ ಎಂದು ಹೆಸರಿಡುವಂತೆ ಮನವಿ ಮಾಡಿದ್ದೇನೆಂದು ಮೈಸೂರಿನ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿಗೆ ಒಡೆಯರ್ ಕೊಡುಗೆಯನ್ನು ಅರಿತು ಟಿಪ್ಪು ಎಕ್ಸ್ಪ್ರೆಸ್ ಹೆಸರು ಬದಲಾವಣೆ ವಿಚಾರವಾಗಿ ಸಾಕಷ್ಟು ಜನ ಮನವಿ ಮಾಡಿದ್ದರು. ಒಡೆಯರ್ ಕೊಡುಗೆ ಅಪಾರವಾಗಿದೆ. ಮೈಸೂರಿಗೆ ರೈಲು ತಂದಿದ್ದು ಮೈಸೂರು ಮಹಾರಾಜರು ಅವರ ಹೆಸರಿನಲ್ಲಿ ಒಂದು ರೈಲು ಇಲ್ಲ. ಆ ವಂಶವನ್ನು ನಾಶ ಮಾಡಲು ಹೋದವನ ಹೆಸರು ರೈಲಿಗೆ ಯಾಕೆ?. ಟಿಪ್ಪು ಸುಲ್ತಾನ್ ಒಂದು ರೈಲು ಹಳಿ ಹಾಕಿಲ್ಲ. ಅಂತಹ ಟಿಪ್ಪು ಹೆಸರು ಯಾಕೆ ಬೇಕು. ಈ ಹೆಸರನ್ನು ಬದಲಾಯಿಸಿಯೇ ತೀರುತ್ತೇವೆ. ಟಿಪ್ಪು ಸುಲ್ತಾನ್ ಹೆಸರು ಇರಬಾರದು. ಕ್ರೆಡಿಟ್ ಕೂಡ ಸೂಕ್ತ ವ್ಯಕ್ತಿಗೆ ನೀಡಬೇಕು ಎಂದಿದ್ದಾರೆ.
ಟಿಪ್ಪು ಎಕ್ಸ್ಪ್ರೆಸ್ ಬದಲು ಮೈಸೂರಿಗೆ ರೈಲು ಸಂಪರ್ಕ ತಂದ ಮಹಾರಾಜರ ಕೊಡುಗೆಯ ಪ್ರತೀಕವಾಗಿ “ಒಡೆಯರ್ ಎಕ್ಸ್ಪ್ರೆಸ್ ” ಎಂದು ಹೆಸರಿಡುವಂತೆ ಮನವಿ ಮಾಡಿದೆ. pic.twitter.com/LaPctOhi7K
— Pratap Simha (@mepratap) February 11, 2022
ರಾಜ್ಯ, ಜಿಲ್ಲೆಯನ್ನು ಮೆಚ್ಚಿಸಲು ಬಜೆಟ್ ಮಂಡಿಸಿಲ್ಲ. ಬದಲಾಗಿ ಇಡೀ ದೇಶವನ್ನು ಮೆಚ್ಚಿಸಲು ಬಜೆಟ್ ಮಂಡಿಸಿದ್ದಾರೆ. ಇಡೀ ದೇಶದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿ ಇಟ್ಟು ಕೊಂಡು ಬಜೆಟ್ ಮಂಡಿಸಲಾಗಿದೆ. ಎಲೆಕ್ಟ್ರಿಕ್ ರೈಲುಗಳ ಸಂಚಾರ ವ್ಯವಸ್ಥೆ ದೇಶದಲ್ಲಿ ಸಂಚಲನ ಹುಟ್ಟಿಸಲಿದೆ. ಈ ವರ್ಷ ಎಲೆಕ್ಟ್ರಿಕ್ ಟ್ರೈನ್ಗಳು ಸಂಚಾರ ಆರಂಭಿಸಲಿವೆ ಎಂದಿದ್ದಾರೆ.
ಕೇಂದ್ರ ಬಜೆಟ್ ಕುರಿತು ಮಾತನಾಡಿ, ಸಿದ್ದರಾಮಯ್ಯ ಅವರೇ ತಮ್ಮ ಆಡಳಿತಾವಧಿಯಲ್ಲಿ ಅತಿ ಹೆಚ್ಚು ಸಾಲ ಮಾಡಿ ಆಡಳಿತ ಮಾಡಿದ್ದಾರೆ. ರಾಜ್ಯದ ಯಾವ ಸಿಎಂ ಮಾಡದಷ್ಟು ಸಾಲವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಅವರಿಗೆ ಅರ್ಥ ವ್ಯವಸ್ಥೆಯೆ ಗೊತ್ತಿಲ್ಲ. ಬಜೆಟ್ ಬಂದರೆ ಸಾಕು ಲಾಪಾಸ್ ಮಾಡಿರುವವರು ಬಿಎ ಪಾಸ್ ಮಾಡಿರುವವರೆಲ್ಲಾ ಆರ್ಥಿಕ ತಜ್ಞರಾಗುತ್ತಾರೆ. ಅವರಿಗೆ ಆರ್ಥಿಕ ವ್ಯವಸ್ಥೆಯೇ ಅರ್ಥವಾಗಲ್ಲ. ಹೀಗಾಗಿ, ಅವರು ಸುಮ್ಮನೆ ಸಾಲದ ಬಜೆಟ್ ಅಂತ ಟೀಕೆ ಮಾಡುತ್ತಾರೆ.