ಮಡಿಕೇರಿ: ಹೊರಗಿನ ಶತ್ರುಗಳನ್ನು ಎದುರಿಸಬಹುದು ಆದರೆ ಒಳಗಿನ ಶತ್ರುಗಳಿಂದಲೇ ಅಪಾಯ ಜಾಸ್ತಿ ಇದೆ ಎಂದು ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಡಿಸೆಂಬರ್ 8 ರಂದು ಹೆಲಿಕಾಪ್ಟರ್ ದುರಂತದಲ್ಲಿ ರಕ್ಷಣಾ ಪಡೆಯ ಮುಖ್ಯಸ್ಥ ಬಿಪಿನ್ ರಾವತ್ ಅಗಲಿಕೆಯಿಂದ ಇಡೀ ದೇಶವೇ ಶೋಕತಪ್ತವಾಗಿದೆ. ಗುರುವಾರ ತಮಿಳುನಾಡಿನಲ್ಲಿ ಹುತಾತ್ಮರ ಮೃತದೇಹ ಮೆರವಣಿಗೆ ಹೋಗುವ ವೇಳೆ ಅಲ್ಲಿನ ಜನರು ಪುಷ್ಪ ನಮನ ಸಲ್ಲಿಸಿ, ಜೈಕಾರ ಕೂಗಿ ತಮ್ಮ ನೋವು ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಕೆಲ ವಿಕೃತ ಮನಸ್ಸಿನ ವ್ಯಕ್ತಿಗಳು ಅವರ ಸಾವನ್ನು ಸಂಭ್ರಮಾಚರಣೆ ನಡೆಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ಇಂತಹ ವಿಕೃತ ಮನಸ್ಸಿನವರನ್ನು ಮಟ್ಟ ಹಾಕಬೇಕು ಎಂದು ಪ್ರತಾಪ್ ಸಿಂಹ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸೈನಿಕರ ತವರು ಜಿಲ್ಲೆ ಕೊಡಗಿಗೆ ಅಮೋಘ ಕೊಡುಗೆ ನೀಡಿದ್ದರು ಬಿಪಿನ್ ರಾವತ್
ಮಡಿಕೇರಿಯಲ್ಲಿ ಮಾತಾನಾಡಿದ ಅವರು, ಹೊರಗಿನ ಶತ್ರುಗಳನ್ನು ಎದುರಿಸಬಹುದು. ಆದರೆ ಒಳಗಿನ ಶತ್ರುಗಳಿಂದಲೇ ಅಪಾಯ ಜಾಸ್ತಿ. ಪಾಕಿಸ್ತಾನ ಅಥವಾ ಹೊರಗಿನ ಶತ್ರುಗಳು ಯಾರೆಂದು ನಮಗೆ ಗೊತ್ತಾಗುತ್ತದೆ. ಆದರೆ ಒಳಗಿನ ಶತ್ರುಗಳನ್ನು ಗುರುತಿಸುವುದು ಹೇಗೆ? ಇಂತಹ ವಿಕೃತರನ್ನು ಹುಡುಕಿ ಶಿಕ್ಷಿಸಬೇಕೆಂದು ನಾನು ಸಿಎಂ ಬೊಮ್ಮಾಯಿ ಅವರಲ್ಲಿ ಮನವಿ ಮಾಡುತ್ತೇನೆ. ಅಂತಹ ವಿಕೃತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈಗಾಗಲೇ ಉತ್ತರ ಪ್ರದೇಶ ಸಿಎಂ ಅಂತಹ ಕ್ರಮಕ್ಕೆ ಮುಂದಾಗಿದ್ದಾರೆ. ನಮ್ಮಲ್ಲಿ ವಿಕೃತ ಮನಸ್ಸಿನವರ ಮೇಲೆ ಕಾನೂನು ರೀತಿಯ ಕ್ರಮಗೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಜನರಲ್ ರಾವತ್ರ ಮರಣವನ್ನು ಸಂಭ್ರಮಿಸಿದ ಕಿಡಿಗೇಡಿ ಅರೆಸ್ಟ್